ದಾವಣಗೆರೆ ಕೆಎಸ್ಆರ್ಟಿಸಿಯಿಂದ ದಾವಣಗೆರೆ-ಜಗಳೂರು-ಉಜ್ಜಿನಿ-ಕಲಬುರಗಿ- ಬೀದರ್ ಮಾರ್ಗದಲ್ಲಿ ರಾಜಹಂಸ ಬಸ್ ಸೇವೆಯ ನೂತನ ಮಾರ್ಗಕ್ಕೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಅವರು ಬುಧವಾರ ದಾವಣಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನೂತನ ರಾಜಹಂಸ ಬಸ್ಗೆ ಚಾಲನೆ ನೀಡಿದರು. ಬಸ್ ದಾವಣಗೆರೆ, ಜಗಳೂರು, ಉಜ್ಜಿನಿ, ಕೊಟ್ಟೂರು, ಕೂಡ್ಲಗಿ, ಹೊಸಪೇಟೆ, ಸಿಂಧನೂರು, ಲಿಂಗಸೂರು, ಕಲಬುರಗಿ, ಹುಮನಾಬಾದ್ ಮಾರ್ಗವಾಗಿ ಬೀದರ್ ತಲುಪಲಿದ್ದು ಇದೇ ಮಾರ್ಗವಾಗಿ ಪ್ರತಿನಿತ್ಯ ವಾಪಸ್ ಮತ್ತೊಂದು ಬಸ್ ಸಂಚರಿಸಲಿದೆ.
ಮಾರ್ಗದ ವಿವರ : ನೂತನ ಬಸ್ ದಾವಣಗೆರೆ ನಿಲ್ದಾಣದಿಂದ ಸಂಜೆ 5 ಗಂಟೆಗೆ ಹೊರಡಲಿದ್ದು, ಬೆಳಗ್ಗೆ 7.30ಕ್ಕೆ ಬೀದರ್ ತಲುಪಲಿದೆ. ಬೀದರ್ನಿಂದ ಸಂಜೆ 4.15 ಕ್ಕೆ ಹೊರಟು ಬೆಳಗ್ಗೆ 7.10ಕ್ಕೆ ದಾವಣಗೆರೆ ತಲುಪಲಿದೆ. ಮಾರ್ಗದ ಅಂತರ 572ಕಿ.ಮೀ ಇದ್ದ್ದು, ಪ್ರಯಾಣ ದರ ರೂ.834 ನಿಗದಿಪಡಿಸಿದೆ.
ಇದೇ ವಾಹನ ಉಜ್ಜಿನಿ ನಿಲ್ದಾಣದಿಂದ ಸಂಜೆ 7 ಕ್ಕೆ ಹೊರಟು ಬೆಳಗ್ಗೆ 5.20 ಕ್ಕೆ ಕಲಬುರಗಿ ತಲುಪಲಿದೆ. ನಂತರ ಕಲಬುರಗಿಯಿಂದ ಸಂಜೆ 6.30ಕ್ಕೆ ಹೊರಟು ಬೆಳಗ್ಗೆ 6 ಗಂಟೆಗೆ ಉಜ್ಜಿನಿ ತಲುಪಲಿದೆ. ಈ ಮಾರ್ಗವು 376 ಕಿ.ಮೀ ಅಂತರವಿದ್ದು, ಪ್ರಯಾಣ ದರ ರೂ.570 ನಿಗದಿಪಡಿಸಿದೆ.
ಬೀದರ್ ಬಸ್ ನಿಲ್ದಾಣದಿಂದ ಸಂಜೆ 4.15 ಹೊರಟು ಬೆಳಗ್ಗೆ 6ಕ್ಕೆ ಉಜ್ಜಿನಿ ತಲುಪಲಿದೆ. ಈ ಮಾರ್ಗವು 494 ಕಿ.ಮೀ ಅಂತರವಿದ್ದು, ಪ್ರಯಾಣ ದರ ರೂ. 732 ನಿಗದಿಪಡಿಸಲಾಗಿದೆ. ಸಾರ್ವಜನಿಕರು ಕೆಎಸ್ಆರ್ಟಿಸಿ ಬಸ್ ಸೇವೆ ಪಡೆಯಲು ಸಂಸದರು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಕೆಎಸ್ಆರ್ಟಿಸಿ ಡಿಸಿ ಶಿವಕುಮಾರಯ್ಯ, ಮಾರ್ಗ ನಿಯಂತ್ರಣಾಧಿಕಾರಿ ಫಕ್ರುದ್ದೀನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.