ಮುಂಬೈ :ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ 5 ತಿಂಗಳ ಬಳಿಕ ಡಿವೋರ್ಸ್ ಕುರಿತಾಗಿ ಮೌನ ಮುರಿದಿದ್ದಾರೆ. ನಮ್ಮ ವಿಚ್ಛೇದನ ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ನಡೆದಿದೆ. ಯಾವುದೇ ವೈಷಮ್ಯದಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡಿವೋರ್ಸ್ ಘೋಷಣೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಮತ್ತು ಟೀಕೆಗಳು ವ್ಯಕ್ತವಾಗಿತ್ತು. ಈ ಹಿನ್ನೆಲೆ ಎ.ಆರ್ ರೆಹಮಾನ್ ಮೌನಕ್ಕೆ ಶರಣಾಗಿದ್ದರು. ಈಗ ಸೈರಾ ಬಾನು ಜೊತೆಗಿನ ಡಿವೋರ್ಸ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿ, ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡುವುದು ಉದ್ದೇಶಪೂರ್ವಕ. ಆದ್ದರಿಂದ ಪ್ರತಿಯೊಬ್ಬರೂ ವಿಮರ್ಶೆಗೆ ಒಳಗಾಗುತ್ತಾರೆ. ಶ್ರೀಮಂತ ವ್ಯಕ್ತಿಯಿಂದ ಹಿಡಿದು ದೇವರುಗಳವರೆಗೆ ಎಲ್ಲರೂ ವಿಮರ್ಶೆಗೆ ಒಳಗಾಗುತ್ತಾರೆ. ನಾನು ಹಾಗೆಯೇ ಎಂದಿದ್ದಾರೆ.
ನಾನು ಯಾರದ್ದೋ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳಿದರೆ, ಬೇರೆ ಯಾರಾದರೂ ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ನಾವು ಭಾರತೀಯರು ಇದನ್ನು ನಂಬುತ್ತೇವೆ. ಯಾರೂ ಅನಗತ್ಯವಾಗಿ ಬೇರೆ ಅವರ ಬಗ್ಗೆ ಮಾತನಾಡಬಾರದು, ಏಕೆಂದರೆ ಪ್ರತಿಯೊಬ್ಬರಿಗೂ ಸಹೋದರಿ, ಪತ್ನಿ, ತಾಯಿ ಇರುತ್ತಾರೆ. ಸೈರಾ ಬಾನು ಅವರು ತಮ್ಮ ಕಾನೂನು ಪ್ರತಿನಿಧಿಗಳ ಮೂಲಕ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಎ.ಆರ್ ರೆಹಮಾನ್ ಸ್ಪಷ್ಟಪಡಿಸಿದ್ದಾರೆ.
1995ರಲ್ಲಿ ವಿವಾಹವಾಗಿದ್ದರು. ಸೈರಾ ಜೊತೆಗಿನ 29 ವರ್ಷಗಳ ದಾಂಪತ್ಯಕ್ಕೆ 2024ರ ನವೆಂಬರ್ 19ರಂದು ಡಿವೋರ್ಸ್ ಘೋಷಿಸಿದರು.