ಬೆಂಗಳೂರು : ಹಾಲಿನ ದರ ಏರಿಕೆ ಬಗ್ಗೆ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ನಮ್ಮ ರಾಜ್ಯದಲ್ಲಿ ಮಾತ್ರ ಕಡಿಮೆ ಬೆಲೆ ಇದೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಇನ್ನೂ ಹೆಚ್ಚಿದೆ. ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ನಾವು ಮಂಡಳಿಗೆ ಮನವಿ ಸಲ್ಲಿಸಿದ್ದೇವೆ ಇಷ್ಟು ಅಂತ ದರದ ಬಗ್ಗೆ ಹೇಳಿಲ್ಲ. ಅರ್ಧ ಲೀಟರ್ ಮಾರಿದರೆ ನಷ್ಟವಾಗುತ್ತದೆ. ಒಂದು ಲೀಟರ್ ಹಾಲು ಮಾರಿದರೆ ಲಾಭ ಆಗುತ್ತದೆ ಎಂದು ತಿಳಿಸಿದರು.
ತುಪ್ಪ ಇವತ್ತು ದರ ಏರಿಕೆ ಮಾಡಲಾಗಿದೆ. ಬೇರೆ ಕಂಪನಿಯ ಹಾಲು ಆನ್ಲೈನ್ ಮಾರ್ಕೆಟಿಂಗ್ ಜಾಸ್ತಿ ಆಗಿದ್ದು, ನಾವು ರೈತರಿಗೆ ಹಾಲು ಕೂಡಲೇ ಹಣ ಕೊಡಬೇಕು. ಬೇರೆ ರಾಜ್ಯಗಳು ಹೆಚ್ಚು ಹಣ ಬಾಕಿ ಉಳಿಸಿಕೊಂಡಿಲ್ಲ ಅನ್ಸುತ್ತೆ ಎಂದರು.
“ನಮ್ಮಲ್ಲಿ 95 ಲಕ್ಷದಿಂದ 1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗುತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ಆಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರೂಪಾಯಿಯನ್ನ ರೈತರಿಗೆ ಕೊಡಲು ಸೂಚಿಸಿದ್ದೇವೆ. 50 ಲಕ್ಷ ಲೀಟರ್ ಮಾರಾಟ ಮಾಡುವುದಕ್ಕೆ ಮಾತ್ರ ನಮಗೆ ಹಣ ಬರುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದ ರೈತರಿಗೆ ಹಣ ಕೊಡುತ್ತಿದ್ದೇವೆ” ಎಂದು ಹೇಳಿದರು.
ಸದ್ಯ ಬೆಣ್ಣೆ ಮತ್ತು ತುಪ್ಪಕ್ಕೆ ಬೇಡಿಕೆ ಇದ್ದು ಈಗ ನಾವು ತುಪ್ಪಕ್ಕೆ ನಿಗದಿ ಮಾಡಿರುವ ಮಾರುಕಟ್ಟೆಗಿಂತ ಕಡಿಮೆಯಿದೆ. ಆದರೆ ಗುಣಮಟ್ಟದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ. ಒಕ್ಕೂಟಗಳ ಮನವಿ ಮೇರೆಗೆ ತುಪ್ಪದ ದರ ಜಾಸ್ತಿ ಮಾಡಲಾಗಿದೆ. ಹಾಲಲ್ಲೂ ಕೆಲವು ಕಡೆ ನಮಗೆ ನಷ್ಟವಾಗುತ್ತಿದೆ. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡಬೇಕಿದೆ. ನಮಗೆ ಹಾಲು ಉತ್ಪಾದಕರು ಹಾಗೂ ಒಕ್ಕೂಟಗಳು ದರ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ ಎಂದು ವಿವರಿಸಿದರು.
“ಹಾಲು ದರ ಏರಿಕೆ ಮಾಡಲು ಮನವಿ ಮಾಡಿದ್ದೇವೆ. ನಮಗೆ ಆಗುತ್ತಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ತಿಳಿಸಿ ಹಾಲಿನ ದರ ಮತ್ತೆ ಏರಿಕೆ ಮಾಡುವಂತೆ ಮನವಿ ಮಾಡುತ್ತೇವೆ. ಹಾಲಿನ ದರ ಏರಿಕೆ ಮಾಡುತ್ತೇವೆ ಎಂದರೆ ಗಲಾಟೆ ಮಾಡುತ್ತಾರೆ. ಉಳ್ಳವರು ತಿನ್ನುವ ಕಾರಣ ತುಪ್ಪದ ಬೆಲೆ ಏರಿಕೆ ಮಾಡಿದ್ದೇವೆ. ಬೆಣ್ಣೆ ದರವನ್ನು ಏರಿಕೆ ಮಾಡಲು ತಿಳಿಸಿದ್ದೇವೆ. ಬೆಣ್ಣೆ ದರವನ್ನೂ ಪರಿಷ್ಕರಿಸಲಾಗುವುದು” ಎಂದು ಮಾಹಿತಿ ನೀಡಿದರು.

































