ಬೆಂಗಳೂರು: ಕಲಾ ಸಮ್ರಾಟ ಎಸ್.ನಾರಾಯಣ್ ಕುಟುಂಬದಲ್ಲಿ ವಿರುದ್ಧ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಸ್.ನಾರಾಯಣ್ ಸೊಸೆ ಪವಿತ್ರ ಗಂಭೀರ ಆರೋಪ ಮಾಡಿದ್ದಾರೆ. ಪವಿತ್ರ ಹಾಗೂ ಎಸ್.ನಾರಾಯಣ್ ಪುತ್ರ ಪವನ್ 2021ರಲ್ಲಿ ಮದುವೆ ಆಗಿದ್ದಾರೆ.
ಇದೀಗ ಪವಿತ್ರಾ, ತನ್ನ ಪತಿ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪ ಪ್ರಕರಣದಲ್ಲಿ ಪವನ್ ಮೊದಲ ಆರೋಪಿ ಆಗಿದ್ದಾರೆ. ನನ್ನ ಪತಿ ಪವನ್ ಓದಿಲ್ಲ, ಹೀಗಾಗಿ ಎಲ್ಲಿಯೂ ಕೆಲಸ ಸಿಗ್ತಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆ.
ಇದರ ಮಧ್ಯೆ ‘ಕಲಾ ಸಾಮ್ರಾಟ್ ಟೀಂ ಅಕಾಡಮಿ’ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡಲಾಗಿತ್ತು. ಅದನ್ನು ಆರಂಭಿಸಲು ಪವನ್, ನಮ್ಮ ಬಳಿ ಹಣ ಕೇಳಿದ್ದ. ಆಗ ನಾನು ತಾಯಿಯ ಒಡವೆಗಳನ್ನ ಅಡವಿಟ್ಟು ಹಣ ಕೊಟ್ಟಿದ್ದೆ. ಕೊನೆಗೆ ಆ ಸಂಸ್ಥೆ ಲಾಸ್ ಆಗಿ ಮುಚ್ಚಲಾಯಿತು. ಅಲ್ಲಿ ಆಗಿರುವ ನಷ್ಟ ತುಂಬಿಸಿಕೊಳ್ಳಲು ನಾನು 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್ಗೆ ನೀಡಿದ್ದೆ.
ಇಷ್ಟೆಲ್ಲ ಆದರೂ ಪ್ರತಿ ದಿನ ಅತ್ತೆ ಭಾಗ್ಯಲಕ್ಷ್ಮಿ (ಎಸ್.ನಾರಾಯಣ್ ಪತ್ನಿ) ಹಾಗು ಪತಿ ನನ್ನ ಮೇಲೆ ಹಲ್ಲೆ ನಡೆಸಿ ಹಣ ತರುವಂತೆ ಒತ್ತಾಯ ಮಾಡಿದ್ದಾರೆ. ಅದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಅತ್ತೆ ಭಾಗ್ಯಲಕ್ಷ್ಮಿ ಹಾಗು ಪತಿ ನನ್ನ ಮನೆಯಿಂದ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಅವಧಿಯಲ್ಲಿ ಒಂದು ಲಕ್ಷದ ಉಂಗುರ ಹಾಗೂ ಖರ್ಚು-ವೆಚ್ಚದ ಹಣ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಮಗನಿಗೆ ತೊಂದರೆಯಾದರೆ ಎಸ್.ನಾರಾಯಣ್, ಭಾಗ್ಯಲಕ್ಷ್ಮಿ ಹಾಗೂ ಪವನ್ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.