ಚಿತ್ರದುರ್ಗ : ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ತಪ್ಪುದಾರಿಗೆ ಹೋಗುವ ಸಮಾಜವನ್ನು ಸರಿದಾರಿಗೆ ತರಬಹುದು ಎಂದು ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ನಟರಾಜ್ ತಿಳಿಸಿದರು.
ತಾರಾ ಮಂಡಲ ಮಕ್ಕಳ ವಿಜ್ಞಾನ ಬಳಗದಿಂದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನ್ಯಾಯ ವಿಜ್ಞಾನವಿಲ್ಲದಿದ್ದರೆ ಅಪರಾಧಶಾಸ್ತ್ರಕ್ಕೆ ಬೆಲೆ ಬರುವುದಿಲ್ಲ. ಎಲ್ಲದಕ್ಕೂ ವಿಜ್ಞಾನದ ಸಂಬಂಧವಿದೆ. ನ್ಯಾಯ ವಿಜ್ಞಾನವಿಲ್ಲದೆ ಪೊಲೀಸರು ಯಾವುದೇ ತನಿಖೆ ನಡೆಸಬಾರದೆಂದು ಕೇಂದ್ರ ಸರ್ಕಾರ 2023, ಜು.1 ರಂದು ಆದೇಶಿಸಿ ವಿಜ್ಞಾನದ ಮಹತ್ವವನ್ನು ಸಾರಿದೆ. ವಿಜ್ಞಾನ ತಳಹದಿ ಬಿಟ್ಟು ಹೋದಾಗ ಸಮಾಜದಲ್ಲಿ ಅಹಿಂಸೆಯಾಗುತ್ತದೆ. ಹಾಗಾಗಿ ಶ್ರೀಸಾಮಾನ್ಯನಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳೆಸಬೇಕಿದೆ ಎಂದು ಹೇಳಿದರು.
ಖಾಸಗಿ ಬದುಕು ಸಾರ್ವಜನಿಕ ಬದುಕಿನ ಜೊತೆ ಸಾಗಬಾರದು. ಪ್ರಪಂಚಕ್ಕೆ ಸವಾಲೊಡ್ಡುವ ರೀತಿ ಭಾರತ ಅದ್ವಿತೀಯ ಸಾಧನೆ ಮಾಡಿದೆ ಎಂದರೆ ವಿಜ್ಞಾನ ಕಾರಣ. ವಿಜ್ಞಾನವಿಲ್ಲದೆ ಏನನ್ನು ಸಾಬಿತುಪಡಿಸಲು ಆಗುವುದಿಲ್ಲ. ಮೌಢ್ಯ, ಕಂದಾಚಾರ, ದುರಾಚಾರವನ್ನು ಸಮಾಜದಿಂದ ತೊಲಗಿಸಬೇಕಾದರೆ ಎಲ್ಲರೂ ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಸರ್ ಸಿ.ವಿ.ರಾಮನ್ರವರು ವಿಜ್ಞಾನವನ್ನು ಜಗತ್ತಿಗೆ ಪರಿಚಯಿಸಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ. ಶಾಲಾ-ಕಾಲೇಜು ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದರು.
ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ ಅಬ್ದುಲ್ ಕಲಾಂ, ಸರ್ ಸಿ.ವಿ.ರಾಮನ್ ಇವರುಗಳೆಲ್ಲಾ ಶ್ರೇಷ್ಟ ವಿಜ್ಞಾನಿಗಳು. ಶಿಕ್ಷಣದ ಜೊತೆ ಮಕ್ಕಳಿಗೆ ವೈಜ್ಞಾನಿಕ ಚಿಂತನೆಯನ್ನು ಮೂಡಿಸಬೇಕು. ಶಾಲೆಯಲ್ಲಿ ಏಕಾಗ್ರತೆಯಿಂದ ವಿಜ್ಞಾನವನ್ನು ಆಲಿಸಿ. ವಿಜ್ಞಾನವಿಲ್ಲದೆ ಜೀವನವಿಲ್ಲ. ವಿಜ್ಞಾನ ಮುಂದುವರೆದಿರುವುದರಿಂದ ಭಾರತದಲ್ಲಿ ಎಲ್ಲವೂ ಬೆರಳ ತುದಿಯಲ್ಲಿ ಸಿಗುವಂತಾಗಿದೆ ಎಂದು ನುಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕøತ ವಿಜ್ಞಾನ ಶಿಕ್ಷಕ ಡಿ.ಮಲ್ಲಾರೆಡ್ಡಿ ಮಾತನಾಡುತ್ತ ಚಿತ್ರದುರ್ಗದ ತಾರಾ ಮಂಡಲ ರಾಷ್ಟ್ರಾದ್ಯಂತ ಅನೇಕ ವೈಜ್ಞಾನಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಕಾರ್ಯದರ್ಶಿ ಬೆಂಗಳೂರಿನ ನಾಗೇಶ ಅರಳಕುಪ್ಪೆ ಮಾತನಾಡಿ ಸರ್ ಸಿ.ವಿ.ರಾಮನ್, ಅಬ್ದುಲ್ ಕಲಾಂ, ಯು.ಆರ್.ರಾವ್ ಸೇರಿದಂತೆ ಇನ್ನು ಅನೇಕ ಪ್ರಖ್ಯಾತ ವಿಜ್ಞಾನಿಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ನೆನಪಿಸಿಕೊಳ್ಳಲೆಬೇಕು. ತಾರಾ ಮಂಡಲದ ಕಾರ್ಯ ಸ್ತುತ್ಯಾರ್ಹ ಎಂದರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಹೆಚ್.ಎಸ್.ಟಿ.ಸ್ವಾಮಿ ಮಾತನಾಡುತ್ತ ನಮ್ಮಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕತೆಯ ಕೊರತೆಯಿದೆ. ವಿಜ್ಞಾನವನ್ನು ಚೆನ್ನಾಗಿ ಅರ್ಥಮಾಡಿಕೊಂಡಾಗ ತನ್ನಷ್ಟಕ್ಕೆ ತಾನೆ ವಿಚಾರ ಮಾಡುವ, ಪ್ರಶ್ನಿಸುವ ಧೈರ್ಯ ಮೂಡುತ್ತದೆ. ಪ್ರಸ್ತುತ ಸಂದರ್ಭದಲ್ಲಿ ವಿಜ್ಞಾನದ ಬಗ್ಗೆ ಚಿಂತನೆ ಮಾಡುವುದು ಅತ್ಯವಶ್ಯಕ ಎಂದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಬಿಇಡಿ.ಕಾಲೇಜು ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಮಾತನಾಡಿ ಇದು ವಿಜ್ಞಾನ ಮತ್ತು ತಂತ್ರಜ್ಞಾನ ಯುಗ. ಈಗಿನ ವಿದ್ಯಾರ್ಥಿಗಳಲ್ಲಿ ಹೊಸ ತಂತ್ರಜ್ಞಾನ, ಕೃತಕ ಬುದ್ದಿಮತ್ತೆಯ ಬಗ್ಗೆ ತಿಳುವಳಿಕೆ ಇರಬೇಕು. ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಹನುಮಂತರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಹೆಣ್ಣು ಮಕ್ಕಳು ವಿಜ್ಞಾನ ರಂಗದಲ್ಲಿ ಹೆಚ್ಚು ಮುಂದೆ ಬರಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ವಿಜ್ಞಾನ ಹಾಸು ಹೊಕ್ಕಾಗಿದೆ. ವಿಜ್ಞಾನವಿಲ್ಲದೆ ಜೀವನವಿಲ್ಲ. ಹಾಗಾಗಿ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ನಿವೃತ್ತ ವಿಜ್ಞಾನ ಶಿಕ್ಷಕ ಎಂ.ಡಿ.ಲತೀಫ್ಸಾಬ್ ವೇದಿಕೆಯಲ್ಲಿದ್ದರು.
ಬಿಇಡಿ. ಪ್ರಶಿಕ್ಷಣಾರ್ಥಿಗಳು ಹಾಗೂ ಶಿಕ್ಷಕರುಗಳು ಈ ಸಂದರ್ಭದಲ್ಲಿದ್ದರು.































