ಮುಂಬೈ; ಖ್ಯಾತಿಯ ಕಾರ್ಕಳ ಮೂಲದ ಪೊಲೀಸ್ ಅಧಿಕಾರಿ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಗೆ ಎಸಿಪಿಯಾಗಿ ಪದೋನ್ನತಿ ದೊರೆತಿದೆ.
ದಯಾ ನಾಯಕ್ ಅವರು ಮುಂಬೈ ಕ್ರೈಂ ಬ್ರಾಂಚ್ ಸೀನಿಯರ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ದಯಾ ನಾಯಕ್ ಅವರು 2004ರ ವೇಳೆಗೆ ಮುಂಬೈ ಭೂಗತ ಲೋಕದ 85ಕ್ಕೂ ಹೆಚ್ಚು ಪಾತಕಿಗಳ ರುಂಡ ಚೆಂಡಾಡಿದ್ದಾರೆ. ಈ ಮೂಲಕ ಮುಂಬೈ ಜನತೆ, ಪ್ರಮುಖವಾಗಿ ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೂರು ವರ್ಷಗಳ ಕಾಲ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದಲ್ಲಿ ಕರ್ತವ್ಯ ಸಲ್ಲಿಸಿದ್ದ ಅವರು ಸಮಾಜ ವಿರೋಧಿ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಡ್ರಗ್ಸ್ ಪ್ರಕರಣಕ್ಕೂ ಕಡಿವಾಣ ಹಾಕಿದ್ದರು.
ಕಾರ್ಕಳ ಸಮೀಪದ ಎಣ್ಣೆಹೊಳೆ ಬಡ್ಡಾ ನಾಯಕ್ ಹಾಗೂ ರಾಧಾ ನಾಯಕ್ ದಂಪತಿ ಪುತ್ರ ದಯಾ ನಾಯಕ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಎಣ್ಣೆಹೊಳೆಯಲ್ಲಿ ಪೂರೈಸಿದ್ದರು. ಬಳಿಕ ಉದ್ಯೋಗ ಅರಸಿ ಮುಂಬೈಯತ್ತ ಮುಖ ಮಾಡಿದ ಅವರು ಅಲ್ಲಿ ಕ್ಯಾಂಟೀನ್ ಸೇರಿದರು. ಬಹಳ ಕಷ್ಟದಿಂದಲೇ ಓದು ಮುಂದುವರಿಸಿ ಮುಂಬೈನಲ್ಲೇ ಪದವಿ ಪಡೆದರು. ಅನಂತರ ಪ್ಲಂಬರ್ ಸೂಪರ್ವೈಸರ್ ಆಗಿ ವೃತ್ತಿ ಜೀವನ ಆರಂಭಿಸಿದ ದಯಾನಾಯಕ್ 1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.