ಚಿತ್ರದುರ್ಗ : ರೋಟರಿ ಕ್ಲಬ್ ಚಿತ್ರದುರ್ಗ ಹಲವಾರು ವರ್ಷಗಳಿಂದ ಅನೇಕ ಜನ ಪರ ಸಾಮಾಜಿಕ ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಪ್ರಾರಂಭವಾಗಿ 60 ವರ್ಷ ತುಂಬಿದ ಈ ಶುಭ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಜನತೆಗೆ ಒಂದು ವಿಶಿಷ್ಟ ಕೊಡುಗೆ ನೀಡುವ ಸದುದ್ದೇಶದಿಂದ ಕಿಡ್ನಿ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರೋಟರಿ ಕ್ಲಬ್ ಆಫ್ ಚಿತ್ರದುರ್ಗ ನಗರದಲ್ಲಿ ಹತ್ತು ಹಾಸಿಗೆಗಳ ಡಯಾಲಿಸಿಸ್ ಕೇಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರ ಪಿಸಿಯೋಥೆರಪಿ ಸೆಂಟರ್, ಲ್ಯಾಬೋರೇಟರಿ ಸ್ಥಾಪನೆ ಮಾಡಲಾಗಿದೆ ಎಂದು ರೋಟರಿ ಟ್ರಸ್ಟ್ನ ಕಾರ್ಯದರ್ಶಿ ಕೆ.ಮಧುಪ್ರಸಾದ್ ತಿಳಿಸಿದರು.
ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್ ಭಾಲಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನಗರದ ವ್ಯಾಪಾರೋದ್ದಿಮೆಗಳಾದ ಎಸ್.ಆರ್.ಬಿ.ಎಂ.ಎಸ್.ನ ಮಾಲೀಕರಾದ ಲಕ್ಷಿಕಾಂತರೆಡ್ಡಿ ಹಾಗೂ ಎಸ್. ವೀರೇಶ್ ದೇಣಿಗೆಯಿಂದ ಚಳ್ಳಕೆರೆ ರಸ್ತೆಯಲ್ಲಿನ ಕೃಷ್ಣಪ್ಪ ಲೇ ಔಟ್ನಲ್ಲಿ ಸ್ಥಳವನ್ನು ಪಡೆಯಲಾಗಿದ್ದು ರೋಟರಿ ಸೇವಾ ಭವನವನ್ನು ಚಿತ್ರದುರ್ಗ ರೋಟರಿ ಟ್ರಸ್ಟನ ಅಡಿಯಲ್ಲಿ ನಿರ್ಮಿಸಲಾಗಿದೆ ಎಂದರು.
ಕಿಡ್ನಿ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರೋಟರಿ ಕ್ಲಬ್ ಆಫ್ ಚಿತ್ರದುರ್ಗ ನಗರದಲ್ಲಿ ಹತ್ತು ಹಾಸಿಗೆಗಳ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿದೆ ಮತ್ತು ಯಂತ್ರಗಳು, ಕಟ್ಟಡಗಳು, ಸೋಲಾರ್ ಪ್ಯಾನಲ್ಗಳ ಸಂಪೂರ್ಣ ವೆಚ್ಚವನ್ನು ನಗರದ ರೋಟರಿ ಕ್ಲಬ್ ಸದಸ್ಯರು ಭರಿಸಿದ್ದಾರೆ. ಸೆಲ್ಕೋ ಫೌಂಡೇಶನ್ ಸೋಲಾರ್ ಪ್ಯಾನಲ್ಗಳು, ಬ್ಯಾಟರಿಗಳು ಮತ್ತು ಅಗತ್ಯ ಉಪಕರಣಗಳನ್ನು ಅಳವಡಿಸಿರುವ ಸೌರಶಕ್ತಿಯ ಮೇಲೆ ಇಡೀ ಕಟ್ಟಡವು ನಿರ್ಮಾಣ ಮಾಡಲಾಗಿದೆ. ಸೆಲ್ಕೋ ಫೌಂಡೇಶನ್ನಿಂದ ಬೆಂಬಲಿತವಾದ 22 ಕಿಲೋ ವ್ಯಾಟ್ ಸೋಲಾರ್ ವ್ಯವಸ್ಥೆಯನ್ನು ಈಗಾಗಲೇ ರೂ 30 ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಆಸ್ಪತ್ರೆಗೆ ದಿನಕ್ಕೆ 50 ರಿಂದ 60 ಯೂನಿಟ್ ವಿದ್ಯುತ್ ಅಗತ್ಯವಿದ್ದು, ಸಂಪೂರ್ಣ ಆಸ್ಪತ್ರೆ ಸೌರಶಕ್ತಿಯಿಂದ ನಡೆಯುತ್ತ್ತದೆ.
ಚಿತ್ರದುರ್ಗ ಜಿಲ್ಲೆ ಮತ್ತು ಅಕ್ಕಪಕ್ಕದ ಪಟ್ಟಣಗಳ ಪಾಲಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ನಗರದಲ್ಲಿ ಹತ್ತು ಡಯಾಲಿಸಿಸ್ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗಿದ್ದು, ಇದರ ಸಂಪೂರ್ಣ ವೆಚ್ಚವನ್ನು ರೋಟರಿ ಕ್ಲಬ್ ಸದಸ್ಯರು ಭರಿಸುತ್ತಿದ್ದಾರೆ. ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಅವರ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ, ಶುಲ್ಕಗಳು ಇನ್ನೂ ನಿಗದಿಯಾಗಿಲ್ಲ ಎಂದು ಅವರು ಆಶಾಕಿರಣ ಡಯಾಲಿಸಿಸ್ ಸೆಂಟರ್,ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಕೌಶಲ್ಯಾಭಿವೃದ್ಧಿ ಕೇಂದ್ರ, ನಿರ್ಮಲಾ ಕೀರ್ತಿಕುಮಾರ್ ಪಿಸಿಯೋಥೆರಪಿ ಸೆಂಟರ್, ಲ್ಯಾಬೋರೇಟರಿ, ಕ್ಲಿನಿಕ್ ಹಾಗೂ ಫಾರ್ಮಸಿ ಸೌಲಭ್ಯವನ್ನು ಹೊಂದಿದೆ ಎಂದರು.
ಕೈಗಾರಿಕೋದ್ಯಮಿಗಳಾದ ಪ್ರವೀಣಚಂದ್ರರವರು ತಿಂಗಳು 200 ಡಯಾಲಿಸಿಸ್ಗಳನ್ನು ಉಚಿತವಾಗಿ ಪ್ರಾಯೋಜಿಸಿದ್ದಾರೆ. ಈ ಕಟ್ಟಡವನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದು. ಡಯಾಲಿಸಿಸ್ ಕೇಂದ್ರದ ಅನುಕೂಲಕ್ಕಾಗಿ ಹವಾನಿಯಂತ್ರಣ ಸೌಲಭ್ಯವನ್ನು ಒದಗಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಶಿರಸಿಯ ಯುವಜಯ ಪೌಂಡೇಷನ್ನ ಸಹಯೋಗ ಪಡೆದಿದ್ದು ಇದರಲ್ಲಿ ಬಿ.ಎ.ಬಿಕಾಂ,ಬಿಎಸ್ಸಿ ಪಧವೀದರದಿಗೆ 2-3 ತಿಂಗಳ ತರಬೇತಿಯನ್ನು ಸಂವಹನ ಕಲೆ. ಟೀಮ್ ವರ್ಕ್ ಇಂಗ್ಲಿಷ್ ಸಂಭಾಷಣೆ ಹಾಗೂ ಇತರ ವಿಷಯಗಳಲ್ಲಿ ನೀಡಿ ಅವರಿಗೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡಲಾಗುವುದು. ಈ ದಿಶೆಯಲ್ಲಿ ಈಗಾಗಲೇ ಶಿರಸಿಯ ಯುವಜಯ ಫೌಂಡೇಷನ್ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 50ಕ್ಕೂ ಹೆಚ್ಚು ಕಂಪನಿಗಳ ಜೊತೆ ಸಂಪರ್ಕವನ್ನು ಹೊಂದಿದೆ. ಇದರಿಂದ ಚಿತ್ರದುರ್ಗ ಜಿಲ್ಲೆಯ ಯುವಕ ಯುವತಿಯರಿಗೆ ಅನುಕೂಲವಾಗಲಿದೆ. ಡಯಾಲಿಸಿಸ್ ಕೇಂದ್ರದ ಉಪಕರಣಗಳಿಗಾಗಿ ರೋಟರಿ ಪೌಂಡೇಷನ್ನಿಂದ ಒಂದು ಕೋಟ ಹನ್ನೆರಡು ಲಕ್ಷ ರೂಪಾಯಿಗಳ ಗ್ರಾಂಟ್ನ್ನು ಪಡೆಯಲಾಗಿದೆ.
ಈ ಎಲ್ಲಾ ಸೌಲಭ್ಯಗಳ ನಿರ್ಮಾಣದಲ್ಲಿ ಹಲವಾರು ಸಂಘ ಸಂಸ್ಥೆಗಳ ಸಹಾಯ / ಸಹಯೋಗ ಪಡೆಯ ಲಾಗಿದ್ದು ಈ ಸೌಲಭ್ಯಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ತುಂಬಾ ಕಡುಬಡವರಿಗೆ ಉಚಿತವಾಗಿ ನೀಡಲು ಉದ್ದೇಶಿಸಿಲಾಗಿದ್ದು. ಈ ಕಾರ್ಯದಲ್ಲಿ ನಗರದ ಎಲ್ಲಾ ದಾನಿಗಳ / ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ. ಈ ಕೇಂದ್ರವೂ ಇದೇ ತಿಂಗಳ 30ರಂದು ಬುಧವಾರ ಬಸವ ಜಯಂತಿ/ ಅಕ್ಷಯ ತೃತೀಯದ ಶುಭದಿನದಿಂದು ಉದ್ಘಾಟನೆಯಾಗಲಿದೆ.
ರೋಟರಿ ಟ್ರಸ್ಟ್ನ ಅಧ್ಯಕ್ಷರಾದ ಪಿ.ಎಸ್ ಶಂಭುಲಿಂಗಪ್ಪ ಮಾತನಾಡಿ, ಏ. 30 ರಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ಡಾ. ಸಾಧು ಗೋಪಾಲ ಕೃಷ್ಣ ಉದ್ಘಾಟನೆಯನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷರಾದ ಎಸ್.ಆರ್. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಅರೋಗ್ಯ ಅಧಿಕಾರಿ ರೇಣುಪ್ರಸಾದ್, ರೋಟೇರಿಯನ್ ಪಿಡಿಜಿ. ರವಿ ವಡ್ಲಮಣಿ, ಪಿಡಿಜಿ. ಬಿ.ಚಿನ್ನಪ್ಪ ರೆಡ್ಡಿ, ಡಿಇಜಿ ರವೀಂದ್ರ, ಪಿಡಿಜಿ ರಮೇಶ್ ವಂಗಲ, ಭಾಗವಹಿಸಲಿದ್ದಾರೆ.
ಗೋಷ್ಟಿಯಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷರಾದ ಜಿ.ಎನ್ ವೀರಣ್ಣ, ಎಸ್,ವೀರೇಶ್, ಕೆ.ಎಸ್.ಚಂದ್ರಮೋಹನ್, ಶ್ರೀಮತಿ ಜಯಶ್ರೀ ಷಾ, ತರುಣ್ ಷಾ, ಮೂರ್ತಿ, ವೆಂಕಟೇಶ್, ವಿಶ್ವನಾಥ್, ಸೂರ್ಯನಾರಾಯಣ ಉಪಸ್ಥಿತರಿದ್ದರು.