ನವದೆಹಲಿ : ಆಕ್ಸಿಯಮ್-4 ಅಡಿಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಭಾರತಕ್ಕೆ ಹಿಂದಿರುಗುತ್ತಿದ್ದಾರೆ.
ಡ್ರ್ಯಾಗನ್ ನೌಕೆ ಮೂಲಕ ಭೂಮಿಯತ್ತ ಆಗಮಿಸುತ್ತಿರುವ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವ್ಹಿಟ್ಸನ್, ಪೋಲೆಂಡ್ನ ಮಿಷನ್ ಸ್ಪೆಷಲಿಸ್ಟ್ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನೀವ್ಸ್ಕಿ, ಹಂಗೇರಿಯದ ಗಗನಯಾನಿ ಟಿಬೋರ್ ಕಾಪು ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. ಐಎಸ್ಎಸ್ನಿಂದ ಯಶಸ್ವಿಯಾಗಿ ಹೊರಟಿರುವ ಡ್ರ್ಯಾಗನ್ ನೌಕೆ ಜುಲೈ 5ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3ಕ್ಕೆ ಭೂಮಿ ತಲುಪಲಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಬಾಹ್ಯಾಕಾಶಯಾನ ಮುಗಿಸಿ ಭೂಮಿಯತ್ತ ಪ್ರಯಾಣ ಮಾಡಿರುವ ಈ ಗಗನಯಾತ್ರಿಗಳನ್ನು ಹೊತ್ತು ಕರೆತರುತ್ತಿರುವ ಡ್ರ್ಯಾಗನ್ ನೌಕೆ ನಾಳೆ ಮಧ್ಯಾಹ್ನ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಇಳಿಯಲಿದೆ. ‘ಈ ಸಮಯ ಸರಿಸುಮಾರು 1 ಗಂಟೆಯ ಅಂತರವನ್ನು ಹೊಂದಿವೆ’ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಭೂಮಿಗೆ ವಾಪಾಸ್ ಹೊರಡುವ ಮುನ್ನ ಶುಭಾಂಶು ಶುಕ್ಲಾ ಐಎಸ್ಎಸ್ನಲ್ಲಿ ಮಾಡಿದ ತಮ್ಮ ವಿದಾಯ ಭಾಷಣ ಮಾಡಿದ್ದು, “41 ವರ್ಷಗಳ ಹಿಂದೆ ಭಾರತೀಯರೊಬ್ಬರು ಬಾಹ್ಯಾಕಾಶಕ್ಕೆ ಬಂದರು. ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು ಅವರು ನಮಗೆ ಹೇಳಿದರು. ಇಂದಿನ ಭಾರತವು ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷೆಯಂತೆ ಕಾಣುತ್ತಿದೆ, ಇಂದಿನ ಭಾರತವು ನಿರ್ಭೀತವಾಗಿ ಕಾಣುತ್ತಿದೆ, ಇಂದಿನ ಭಾರತವು ಆತ್ಮವಿಶ್ವಾಸದಿಂದ ಕಾಣುತ್ತಿದೆ, ಇಂದಿನ ಭಾರತವು ಹೆಮ್ಮೆಯಿಂದ ತುಂಬಿದೆ. ಇಂದಿನ ಭಾರತವು ಇನ್ನೂ ‘ಸಾರೆ ಜಹಾಂ ಸೆ ಅಚ್ಚಾ’ ಎಂದು ಕಾಣುತ್ತದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ನಮ್ಮ ಮುಂದಿನ ಪ್ರಯಾಣ ದೀರ್ಘ ಮತ್ತು ಕಷ್ಟಕರವಾಗಿರಬಹುದು, ಆದರೆ ಅದು ಪ್ರಾರಂಭವಾಗಿದೆ ಎಂಬುದಂತೂ ನಿಜ” ಎಂದು ಹೇಳಿದ್ದಾರೆ.