ಚಿತ್ರದುರ್ಗ: ಆಗಸ್ಟ್ 27ರಂದು ಗಣೇಶ ಚತುರ್ಥಿ ಪ್ರಯುಕ್ತ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಪರಿಸರ ಸ್ನೇಹಿಯಾಗಿ ವಿಸರ್ಜಿಸಲು ಚಿತ್ರದುರ್ಗ ನಗರಸಭೆಯು ನಗರದ ವಿವಿಧೆಡೆ ತಾತ್ಕಾಲಿಕವಾಗಿ ನೀರಿನ ತೊಟ್ಟಿಗಳನ್ನು ವ್ಯವಸ್ಥೆ ಮಾಡಿದೆ.
ಗಣೇಶ ಚತುರ್ಥಿ ಪ್ರಯುಕ್ತ ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂಹತಹ ಯಾವುದೇ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ಸರ್ಕಾರದಿಂದ ನಿಷೇಧಿಸಲಾಗಿದೆ. ಸಾರ್ವಜನಿಕರು ಮಣ್ಣಿನಿಂದ ನಿರ್ಮಿಸಿದ ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿ ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿ ಆಚರಿಸಲು ಕೋರಿದೆ.
ಪ್ರತಿಷ್ಠಾಪಿಸಿ ಪೂಜಿಸಿದ ಗಣೇಶ ಮೂರ್ತಿಗಳನ್ನು ನೈಸರ್ಗಿಕ ನೀರಿನ ಮೂಲಗಳಾದ ಹೊಂಡ, ಕೆರೆ, ಭಾವಿಗಳಲ್ಲಿ ವಿಸರ್ಜಿಸುವುದರಿಂದ ಜಲ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಉಂಟಾಗಿ ಜೀವ ರಾಶಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸರಕ್ಕೆ ದಕ್ಕೆಯಾಗದಂತೆ ಗಣೇಶ ಚತುರ್ಥಿ ಆಚರಿಸಲು ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ತಾತ್ಕಾಲಿಕ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ.
ಚಿತ್ರದುರ್ಗ ನಗರಸಭೆ ಪ್ರದೇಶದ ಸಾರ್ವಜನಿಕರು ಪೂಜಿಸಿದ ನಂತರ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ಸದ್ಬಳಕೆ ಮಾಡಿಕೊಂಡು ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸಲು ಮನವಿ ಮಾಡಿದೆ.
ತಾತ್ಕಾಲಿಕ ನೀರಿನ ತೊಟ್ಟಿ ವ್ಯವಸ್ಥೆ ಮಾಡಿರುವ ಸ್ಥಳಗಳ ವಿವರ: ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯ ಒನಕೆ ಓಬವ್ವ ಸ್ಟೆಡಿಯಂ ಹತ್ತಿರ, ಐಯುಡಿಪಿ ಬಡಾವಣೆ ರಾಜ್ ಕುಮಾರ್ ಪಾರ್ಕ್ ಹತ್ತಿರ, ಕೋಟೆ ರಸ್ತೆಯ ಏಕನಾಥೇಶ್ವರಿ ಪಾದ ಗುಡಿ ಮುಂಭಾಗ, ಜೆ.ಸಿ.ಆರ್. ಬಡಾವಣೆಯ ಗಣೇಶ ದೇವಸ್ಥಾನದ ಹತ್ತಿರ,ಮ ಸಿಹಿನೀರು ಹೊಂಡದ ಆವರಣ, ಪತಾಂಜಲಿ ಆಸ್ಪತ್ರೆ ಪಕ್ಕ, ಕೆಳಗೋಟೆಯ ಚೆನ್ನಕೇಶವಸ್ವಾಮಿ ದೇವಸ್ಥಾನದ ಹತ್ತಿರ, ತುರುವನೂರು ರಸ್ತೆಯ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮುಂಭಾಗ, ಗೋಪಾಲಪುರ ನೀರಿನ ಟ್ಯಾಂಕ್ ಹತ್ತಿರ, ಗುಮಸ್ತರ ಕಾಲೋನಿ ರೈತ ಭವನದ ಹತ್ತಿರ ಜೋಗಿಮಟ್ಟಿ ರಸ್ತೆಯ ತಿಪ್ಪಿನಘಟ್ಟಮ್ಮ ದೇವಸ್ಥಾನ ಹತ್ತಿರದ ಪಾರ್ಕ್, ಚಂದ್ರವಳ್ಳಿ ಕೆರೆ ಹತ್ತಿರ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.