ಬೆಂಗಳೂರು : ಈ ಸರಕಾರದ ನಟ್ ಮತ್ತು ಬೋಲ್ಟ್ ಎರಡೂ ಸಡಿಲ ಆಗಿದೆ ಎಂಬುದು ಸ್ಪಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ವಿಷಯದಲ್ಲಿ ಈ ಸರಕಾರದ ನಟ್ ಮತ್ತು ಬೋಲ್ಟ್ ಲೂಸ್ ಆಗಿದೆ. ಇದು ಮಾನ್ಯ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನುಡಿದರು.
ಒಂದು ಕಡೆ ಹೈನುಗಾರಿಕೆಗೆ ಪ್ರೋತ್ಸಾಹಧನದ ಪ್ರಸ್ತಾಪ ಮಾಡಿದ್ದಾರೆ. ಸಾವಿರಾರು ಕೋಟಿ ಹಳೆಯ ಪ್ರೋತ್ಸಾಹಧನ ಹಾಗೇ ಬಾಕಿ ಉಳಿಸಿಕೊಂಡಿದ್ದಾರೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು 90 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಎಷ್ಟು ಮೀಸಲಿಟ್ಟಿದ್ದಾರೆ? ಎಷ್ಟು ಖರ್ಚಾಗಿದೆ ಎಂದು ಪ್ರಶ್ನಿಸಿದರು.
ಮಾನ್ಯ ರಾಜ್ಯಪಾಲರ ಭಾಷಣ ಕೇಳಿಸಿಕೊಂಡರೆ ರಾಜ್ಯಪಾಲರ ಸಮಯವನ್ನು ಕೂಡ ಈ ಸರಕಾರ ವ್ಯರ್ಥ ಮಾಡಿದೆ. ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸುವುದರಲ್ಲಿ ಮತ್ತು ಸರಕಾರದ ಹಣಕಾಸಿನ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂಬ ಹಸಿಸುಳ್ಳನ್ನು ಈ ಕಾಂಗ್ರೆಸ್ ಸರಕಾರವು ಗೌರವಾನ್ವಿತ ರಾಜ್ಯಪಾಲರ ಬಾಯಲ್ಲಿ ಹೇಳಿಸಿದೆ ಎಂದು ಟೀಕಿಸಿದರು.
ಅತ್ಯಂತ ಕಳಪೆ ಸಾಧನೆ ಮಾಡಿದ ಸರಕಾರ- ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ ಸರಕಾರ ಇದೆಂದು ದೂರಿದರು. ಆದರೆ, ಮಾನ್ಯ ಗವರ್ನರ್ ಕೈಯಲ್ಲಿ ತಾವೇನೋ ಚಾಂಪಿಯನ್ ಎಂಬಂತೆ ಹೇಳಿಕೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ನುಡಿದರು.
ಸುಳ್ಳುಗಳ ಪಟ್ಟಿ ಮಾಡಿ ಹೇಳಿಸಿದ ಸರಕಾರ- ಛಲವಾದಿ ನಾರಾಯಣಸ್ವಾಮಿ
ಒಂದು ರೀತಿಯ ಪಾಪರ್ ಚೀಟಿ ಎತ್ತಿಕೊಂಡ ಈ ಸರಕಾರವು ಕೇವಲ ಸುಳ್ಳುಗಳನ್ನು ಪಟ್ಟಿ ಮಾಡಿ ಗೌರವಾನ್ವಿತ ರಾಜ್ಯಪಾಲರ ಕಡೆಯಿಂದ ಹೇಳಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.