ಚಿತ್ರದುರ್ಗ: ಇಡೀ ದೇಶದಲ್ಲಿ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ 2020 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿತು. ಈ ನಿಟ್ಟಿನಲ್ಲಿ ಇಡೀ ದೇಶಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಹಲವಾರು ಹಂತಗಳಲ್ಲಿ ವಿಚಾರ ಸಂಕಿರಣಗಳು, ಚರ್ಚೆಗಳು, ಶಾಲಾ ಕಾಲೇಜುಗಳ ಮಟ್ಟದಲ್ಲಿ ಹಾಗೂ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ನಡೆದವು. ಹೀಗಿದ್ದಾಗ್ಯೂ ನಂತರದಲ್ಲಿ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲೇ ಇಲ್ಲ. ಇದು ಅತ್ಯಂತ ದುರದೃಷ್ಠಕರ ಸಂಗತಿಯಾಗಿದೆ ಎಂದು ಸಂಸದ ಗೋವಿಂದ ಕಾರಜೋಳರವರು ಹೇಳಿದರು.
ಚಿತ್ರದುರ್ಗ ತಾಲ್ಲೂಕು ಗುತ್ತಿನಾಡು ಗ್ರಾಮದ ಕುವೆಂಪು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 320 ಮಕ್ಕಳಿಗೆ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಸಂಸ್ಥೆ, ನವದೆಹಲಿ ಇವರ ಸಹಯೋಗದಲ್ಲಿ ಉಚಿತ ಶಾಲಾ ಬ್ಯಾಗ್, ಹಾಗೂ ಸ್ವೆಟರ್ಗಳ ವಿತರಣಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಠ್ಯಕ್ರಮವನ್ನು ಕಡಿಮೆ ಮಾಡಿ ಮೂಲಭೂತ ವಿಷಯಗಳ ಮೇಲೆ ಕೇಂದ್ರೀಕರಿಸುವ ರೀತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು, ಶಿಕ್ಷಣದಿಂದ ಮಕ್ಕಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶವಾಗಿತ್ತು, ಆದರೆ ಕರ್ನಾಟಕದಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿದ್ದಾರೆ ಎನ್ನುವ ನೆಪವೊಡ್ಡಿ ಹಳೇ ಶಿಕ್ಷಣ ನೀತಿಯನ್ನೇ ಕಾಂಗ್ರೆಸ್ನವರು ಮುಂದುವರಿಸಿದ್ದಾರೆ, ಇದು ಅತ್ಯಂತ ಘೋರವಾದ ಸಂಗತಿಯಾಗಿದೆ, ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಶಿಕ್ಷಣ ಕ್ಷೇತ್ರ ಹೊಸ ರೂಪವನ್ನೇ ಪಡೆಯಿತು. ಅಷ್ಟೊಂದು ದೂರದೃಷ್ಟಿಯನ್ನು ವಾಜಪೇಯಿಯವರು ಹೊಂದಿದ್ದರು. ಈಗಲೂ ಕೂಡ ಅತ್ಯುತ್ತಮ ಶಿಕ್ಷಕರುಗಳು ಸಿಗುವುದು ಸರ್ಕಾರಿ ಶಾಲೆಗಳಲ್ಲಿ, ಹೀಗಿದ್ದೂ ಕೂಡ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರ ಸಂಖ್ಯೆ ಸುಮಾರು 1 ಲಕ್ಷದಷ್ಟಿದೆ, ಇವರೆಲ್ಲರಿಗೂ ಕೂಡ ಸಮವಸ್ತ್ರ, ಸ್ಕೂಲ್ ಬ್ಯಾಗ್, ಶೂ-ಸಾಕ್ಸ್, ಸ್ವೆಟರ್ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು, ಮೊದಲ ಹಂತದಲ್ಲಿ 15 ಸಾವಿರ ಮಕ್ಕಳಿಗೆ ಈಗಾಗಲೇ ಪರಿಕರಗಳು ಬಂದಿವೆ ಇವನ್ನು ವಿತರಣೆ ಮಾಡಿ ಎರಡನೇ ಹಂತದಲ್ಲಿ ಉಳಿದ ಮಕ್ಕಳಿಗೆ ವಿತರಣೆ ಮಾಡಲಾಗುವುದು ಈ ದಿನ ಚಿತ್ರದುರ್ಗ ತಾಲ್ಲೂಕಿನ ಗುತ್ತಿನಾಡು, ಕವಾಡಿಗರಹಟ್ಟಿ, ಐ.ಯು.ಡಿ.ಪಿ. ಲೇಔಟ್, ಮದಕರಿಪುರ ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುವುದು ಮಕ್ಕಳು ಹಾಗೂ ಶಿಕ್ಷಕರುಗಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಭಗೀರಥಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು ವಹಿಸಿದ್ದರು. ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗಭೂಷಣ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಮಾಧುರಿ ಗಿರೀಶ್, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ ಮುರುಳಿ, ನಾಗರಾಜಪ್ಪ, ನಿವೃತ್ತ ಆರಕ್ಷಕ ಉಪಾಧೀಕ್ಷಕರು ಚಿತ್ರದುರ್ಗ, ಈಶ್ವರ್, ಸಹ ಸಂಯೋಜಕರು, ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಸಂಸ್ಥೆ, ತಾಲ್ಲೂಕು ಉಪ್ಪಾರ ಸಮಾಜದ ಗೌರವಾಧ್ಯಕ್ಷರಾದ ತಿಪ್ಪೇಸ್ವಾಮಿ, ಅಜ್ಜಪ್ಪ ಮೆದೆಹಳ್ಳಿ, ಬ್ಲಾಕ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಂಪತ್ಕುಮಾರ್, ಮಟ್ಟಿ ಹನುಮಂತಪ್ಪ, ಅರುಣ್ ಲಾಯರ್, ನಾಗೇಶ್ ಕೆ.ಟಿ. ಬಸವರಾಜ ಹಂಪಯ್ಯನ ಮಾಳಿಗೆ ಸೇರಿದಂತೆ ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ತಿತರಿದ್ದರು.