ಮುಂಬೈ: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಅಜ್ಜಿಯನ್ನು ಮೊಮ್ಮಗನೇ ಕಸದ ತೊಟ್ಟಿಗೆ ಎಸೆದುಹೋದ ಅಮಾನವೀಯ ಘಟನೆಯೊಂದು ಮುಂಬಯಿ ಮಹಾನಗರದಲ್ಲಿ ಸಂಭವಿಸಿದೆ. 60 ವರ್ಷದ ಯಶೋದಾ ಗಾಯಕ್ವಾಡ್ ಎಂಬ ಹಿರಿಯ ಮಹಿಳೆ ಕಸದ ತೊಟ್ಟಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನರಳುತ್ತಿರುವುದನ್ನು ನೋಡಿ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.
ಯಶೋದಾ ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಕಳೆದ ಶನಿವಾರ ಬೆಳಗ್ಗೆ ಗೋರೆಗಾಂವ್ ಸಮೀಪ ಆರೆ ಕಾಲನಿಯ ರಸ್ತೆಬದಿಯ ಕಸದ ರಾಶಿಯ ಮೇಲೆ ವೃದ್ಧೆ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದನ್ನು ಅಲ್ಲೇ ಹೋಗುತ್ತಿದ್ದವರು ಯಾರೋ ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವೃದ್ಧೆಯನ್ನು ಅಲ್ಲಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಗ್ಗೆ ಮಹಿಳೆ ಪತ್ತೆಯಾಗಿದ್ದರೂ ಸಂಜೆ 5.30ರ ಹೊತ್ತಿಗೆ ಮಾತ್ರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಯಿತು. ಮಹಿಳೆ ತನ್ನ ಕುಟುಂಬ ಸದಸ್ಯರ ಎರಡು ನಿವಾಸಗಳ ವಿಳಾಸವನ್ನು ಹಂಚಿಕೊಂಡಿದ್ದಾರೆ. ಒಂದು ಮಲಾಡ್ನಲ್ಲಿ ಮತ್ತು ಇನ್ನೊಂದು ಕಾಂದಿವಲಿಯಲ್ಲಿದ್ದು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಬಂಧಿಕರನ್ನು ಪತ್ತೆಹಚ್ಚಲು ಪ್ರಯತ್ನಿಸಿದಾಗ ಮೊಮ್ಮಗನೇ ತನ್ನನ್ನು ಕಸದ ರಾಶಿಯಲ್ಲಿ ಎಸೆದು ಹೋಗಿದ್ದಾನೆಂದು ವೃದ್ಧೆ ತಿಳಿಸಿದ್ದಾರೆ. ಮೊಮ್ಮಗ ಈ ರೀತಿಯ ಅಮಾನವೀಯ ಕೆಲಸವನ್ನು ಏಕೆ ಮಾಡಿದನೆಂದು ಸ್ಪಷ್ಟವಾಗಿಲ್ಲ.