ಬೆಂಗಳೂರು: ಪ್ರತಿಪಕ್ಷ ಬಿಜೆಪಿ ಪ್ರತಿಭಟನೆಯ ನಡುವೆ ಬಿಬಿಎಂಪಿಯನ್ನು ಏಳು ಪಾಲಿಕೆಗಳನ್ನಾಗಿ ವಿಭಜಿಸುವ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸುವ ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಹಾಗೂ ಮೇಯರ್, ಉಪ ಮೇಯರ್ಗೆ 30 ತಿಂಗಳ ಅವಧಿಯನ್ನು ಈ ಮಸೂದೆ ಒದಗಿಸುತ್ತದೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿಧಾನಸಭೆಯಲ್ಲಿಂದು ಈ ಮಸೂದೆ ಮಂಡಿಸಿದರು.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಅಧಿಕಾರ ಮತ್ತು ಆಡಳಿತದ ವಿಕೇಂದ್ರೀಕರಣ ಬೇಕು. ಕೆಲವು ವಿರೋಧ ಪಕ್ಷದ ಸದಸ್ಯರು ಹೇಳುತ್ತಿರುವಂತೆ ನಾವು ಬೆಂಗಳೂರನ್ನು ನಾಶ ಮಾಡುತ್ತಿಲ್ಲ. ಬದಲಿಗೆ ನಾವು ಅದನ್ನು ಬಲಪಡಿಸುತ್ತಿದ್ದೇವೆ. ಬೆಂಗಳೂರನ್ನು ಬಲಿಷ್ಠಗೊಳಿಸುತ್ತೇವೆ” ಎಂದು ಬೆಂಗಳೂರಿಗೆ ಹೊಸ ದಿಕ್ಕನ್ನು ನೀಡಲು ಈ ಮಸೂದೆಯನ್ನು ತರಲಾಗಿದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಒಪ್ಪದ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಬಯಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಈ ಮಸೂದೆ ಅಪಮಾನ ಮಾಡಿದೆ. ಇತರ ಸ್ಥಳೀಯ ಸಂಸ್ಥೆಗಳನ್ನು ಹಲವಾರು ವಿಭಾಗಗಳಾಗಿ ವಿಂಗಡಿಸಲು ಇದೇ ರೀತಿಯ ಬೇಡಿಕೆಯನ್ನು ಮುಂದಿಡಲು ಕಾಂಗ್ರೆಸ್ ದಾರಿ ಮಾಡಿಕೊಡುತ್ತಿದೆ. ಬೆಂಗಳೂರನ್ನು ವಿಭಜಿಸುವುದರಿಂದ ನಮಗೆ ಪ್ರಯೋಜನವಾಗುವುದಿಲ್ಲ ಎಂದು ಅಶೋಕ ಹೇಳಿದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ಕಳೆದ ಹಲವು ವರ್ಷಗಳಿಂದ ಚುನಾಯಿತ ಸಂಸ್ಥೆ ಇಲ್ಲದೇ ಮುಖ್ಯ ಆಯುಕ್ತರೇ ಬಿಬಿಎಂಪಿಯನ್ನು ನಡೆಸುತ್ತಿರುವಾಗ ವಿಭಜಿಸುವುದೇಕೆ ಎಂದು ಪ್ರಶ್ನಿಸಿದರು. ಇನ್ನೂ ಬಿಬಿಎಂಪಿ ಆಡಳಿತ ವಿಕೇಂದ್ರೀಕರಣ ಮಾಡಬೇಕಾದರೆ ಚುನಾವಣೆ ನಡೆಸಿ, ನಗರವನ್ನು ಯಾರು ಉತ್ತಮವಾಗಿ ನಿರ್ವಹಿಸುತಾರೋ ಅಂತವರನ್ನು ಪಡೆಯಿರಿ. ಗ್ರೇಟರ್ ಬೆಂಗಳೂರು ರಚನೆಗೆ ಸರ್ಕಾರ ಒಲವು ಹೊಂದಿದ್ದರೆ
ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ನಂತರ ಅದನ್ನು ಮಾಡಬೇಕು ಎಂದು ಅವರು ಹೇಳಿದರು. ಬಿಬಿಎಂಪಿ ಆಡಳಿತವನ್ನು ಬಲಪಡಿಸಲು ನಿಮ್ಮನ್ನು ಬೆಂಬಲಿಸುತ್ತೇವೆ ಆದರೆ ಬೆಂಗಳೂರನ್ನು ವಿಭಜಿಸಬೇಡಿ ಎಂದು ವಿಶ್ವನಾಥ್ ಹೇಳಿದರು