ಉಡುಪಿ ಜಿಲ್ಲೆಗೆ ಹರಿರಾಮ್ ಶಂಕರ್ ಎಸ್ಪಿಯಾಗಿ ಆದೇಶ ನೀಡಲಾಗಿದೆ. ಕಳೆದ ಸುಮಾರು 20 ತಿಂಗಳಿನಿಂದ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಡಾ.ಅರುಣ್ ಕೆ. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ವರ್ಗಾವಣೆ ಮಾಡಿದೆ.
ದಕ್ಷ ಅಧಿಕಾರಿಯಾಗಿ, ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜಿಲ್ಲೆಯಲ್ಲಿ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದ ಡಾ.ಅರುಣ್, 2023ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕೈ ಮೀರದಂತೆ ನೋಡಿಕೊಂಡಿದ್ದರು.
ಡಾ.ಅರುಣ್ ಅವರ ಸ್ಥಾನಕ್ಕೆ ಈಗ ಪೊಲೀಸ್ ಇಂಟಲಿಜೆನ್ಸ್ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಹರಿರಾಮ್ ಶಂಕರ್ರನ್ನು ನಿಯುಕ್ತಿ ಗೊಳಿಸಲಾಗಿದೆ. ಕೇರಳದ ತ್ರಿಶೂರ್ನ ಹರಿರಾಮ್ ಶಂಕರ್, ಕಲ್ಲಿಕೋಟೆ ಎನ್ಐಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2016ರಲ್ಲಿ ತಮ್ಮ ಐದನೇ ಪ್ರಯತ್ನದಲ್ಲಿ ಅವರು ಯುಪಿಎಸ್ಸಿಯಲ್ಲಿ 145ನೇ ರ್ಯಾಂಕ್ ಪಡೆದು ತಾವು ಬಯಸಿದ ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದರು. ಹರಿರಾಮ್ ಶಂಕರ್ ಅವರು ಬೆಳಗಾವಿ, ಕುಂದಾಪುರ ಉಪವಿಭಾಗದ ಎಸಿಪಿ, ಮಂಗಳೂರಿನಲ್ಲಿ ಡಿಸಿಪಿ, ಹಾಸನದಲ್ಲಿ ಎಸ್ಪಿಯಾಗಿಯೂ ಕಾರ್ಯನಿರ್ವಹಿಸಿದ್ದರು.