ಬೆಂ.ಗ್ರಾಂ.ಜಿಲ್ಲೆ: ಪ್ರವಾಸೋದ್ಯಮ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ತಾಣಗಳಾದ ದೇವನಹಳ್ಳಿ ತಾಲ್ಲೂಕಿನ ಕೋಟೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಚಿಕ್ಕ ಮಧುರೆಯ ಶನಿ ಮಹಾತ್ಮ ದೇವಸ್ಥಾನ, ನೆಲಮಂಗಲ ತಾಲ್ಲೂಕಿನ ಶಿವಗಂಗೆಯ ಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಸ್ಥಾನಗಳನ್ನು ಒಳಗೊಂಡ ಪ್ರವಾಸಿ ತಾಣಗಳಿಗೆ ಬೆಂಗಳೂರು ಗ್ರಾಮಾಂತರ ಪ್ರವಾಸ(ಬಿ.ಆರ್.ಟಿ), ವ್ಯವಸ್ಥಿತ ಪ್ರವಾಸವನ್ನು ಕೆ.ಎಸ್.ಡಿ.ಟಿ.ಸಿ ನಿಗಮದಿಂದ ಆಯೋಜನೆ ಮಾಡಲಾಗಿದ್ದು, ಆಸಕ್ತ ಪ್ರವಾಸಿಗರು ಆನ್ಲೈನ್ ಮೂಲಕ ಬುಕಿಂಗ್ ಮಾಡಬಹುದಾಗಿದೆ.
ಪ್ರತೀ ದಿನ ಯಶವಂತಪುರ ಕೆಎಸ್ಟಿಡಿಸಿ ಕಚೇರಿಯಿಂದ ಬೆಳಿಗ್ಗೆ 7 ಗಂಟೆಗೆ ಬಸ್ ತೆರಳಿ ಸುಮಾರು 8:30 ಕ್ಕೆ ದೇವನಹಳ್ಳಿ ಕೋಟೆಗೆ ತಲುಪುತ್ತದೆ, 10 ಗಂಟೆಗೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ, 11:45ಕ್ಕೆ ಚಿಕ್ಕ ಮಧುರೆ ಹಾಗೂ ಶನಿ ಮಹಾತ್ಮ ದೇವಸ್ಥಾನಕ್ಕೆ, ಮಧ್ಯಾಹ್ನದ ಊಟದ ಸಮಯ 1:30 ರಿಂದ 2 ಗಂಟೆಯವರೆಗೆ. 2:30 ಕ್ಕೆ ಶಿವಗಂಗೆಯ ಗಂಗಾಧರೇಶ್ವರ ಮತ್ತು ಹೊನ್ನಾದೇವಿ ದೇವಾಲಯಕ್ಕೆ, ಕೊನೆಯದಾಗಿ 6 ಗಂಟೆಗೆ ಯಶವಂತಪುರ ಕೆಎಸ್ಟಿಡಿಸಿ ಕಚೇರಿಗೆ ವಾಪಸ್ಸಾಗುವುದು. ಒಂದು ದಿನದ ಪ್ಯಾಕೇಜ್ ಟೂರ್ ಒಬ್ಬರಿಗೆ 830 ರೂ.ಗಳು.
ಆಸಕ್ತ ಪ್ರವಾಸಿಗರು ಕೆ.ಎಸ್.ಡಿ.ಟಿ.ಸಿ ಯ ಅಧಿಕೃತ ಜಾಲತಾಣವಾದ www.kstdc.co ಮುಖಾಂತರ ಟಿಕೆಟ್ ಬುಕ್ ಮಾಡಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-43344334/8970650070 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.