ನವದೆಹಲಿ: ದೈನಂದಿನ ಜೀವನದ ಒತ್ತಡದಲ್ಲಿ ತಲೆನೋವು ಸಾಮಾನ್ಯವಾಗಿದೆ. ಆದರೆ ತಲೆ ನೋವು (Headache) ಬಂದ ತಕ್ಷಣ ಅದಕ್ಕೆ ಸೂಕ್ತವಾದ ಮಾತ್ರೆ ಮೊದಲು ಹುಡುಕುತ್ತೇವೆ. ಆದರೆ ಪ್ರತಿಯೊಂದು ತಲೆನೋವು ಒಂದೇ ಕಾರಣದಿಂದ ಉಂಟಾಗುವುದಿಲ್ಲ. ತಲೆನೋವು ಬರುವುದಕ್ಕೆ ಹತ್ತಾರು ಕಾರಣಗಳು ಇವೆ.ಮಾನಸಿಕ ಒತ್ತಡ,ಅಧಿಕ ರಕ್ತದೊತ್ತಡ, ಹಾರ್ಮೋನ್ ಗಳ ಅಸಮತೋಲನ, ಮೈಗ್ರೇನ್ ಹೀಗೆ ನಾನಾ ಕಾರಣಗಳಿಂದ ತಲೆ ನೋವು ಉಂಟಾಗುವ ಸಾಧ್ಯತೆ ಇದೆ.ಆದರೆ ದೇಹಕ್ಕೆ ಯಾವುದೇ ಹಾನಿಯಾಗದಂತೆ ತಲೆನೋವನ್ನು ಶಮನಗೊಳಿಸಲು ಕೆಲವು ಪರ್ಯಾಯ ವಿಧಾನಗಳು ಇದೆ. ಪೌಷ್ಟಿಕ ತಜ್ಞ ರೊಬ್ಬರು ತಲೆನೋವಿನ ವಿಧ ಹಾಗೂ ಅದಕ್ಕೆ ಸರಿಯಾದ ಆಹಾರ ಸೇವಿಸುವ ಮೂಲಕ ನೈಸಗಿರ್ಕ ಪರಿಹಾರ ಕ್ರಮವನ್ನು ತಿಳಿಸಿದ್ದಾರೆ.
ಮೈಗ್ರೇನ್ಗೆೆ ಪರಿಹಾರ ಕ್ರಮ
ತಲೆನೋವಿನ ಹಲವು ವಿಧಗಳಲ್ಲಿ ಮೈಗ್ರೇನ್ ಕೂಡ ಒಂದಾಗಿದೆ. ಮೈಗ್ರೇನ್ ಕೇವಲ ಸಾಮಾನ್ಯ ತಲೆನೋವು ಅಲ್ಲ. ಇದು ಒಂದೇ ಭಾಗ ತಲೆ ಸಿಡಿಯುವಂತಹ ನೋವು,ಶ್ರವಣೇಂದ್ರಿಯ ಚಲನೆಗೆ ತೊಂದರೆ ಮತ್ತು ವಾಕರಿಕೆ ಮತ್ತು ವಾಂತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತದೆ. ಇದಕ್ಕೆ ಪರಿಹಾರ ಕ್ರಮವಾಗಿ ನಿಂಬೆ ಮಾತ್ರೆ ಸೇವನೆ ಮಾಡಿದರೆ ಇಂತಹ ತಲೆ ನೋವಿನಿಂದ ಮುಕ್ತಿ ಪಡೆಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.ನಿಂಬೆ ಮಾತ್ರೆಯಲ್ಲಿ ನಿಂಬೆ ರಸ,ಉಪ್ಪು, ಕರಿಮೆಣಸಿನ ಪುಡಿ ಬಳಕೆ ಮಾಡುತ್ತಾರೆ.ನಿಂಬೆ ಮಾತ್ರೆಯಲ್ಲಿ ಬಳಸುವ ಎಲ್ಲಾ ಪದಾರ್ಥಗಳು ಉತ್ಕರ್ಷಣ ನಿರೋಧಕ ಗಳಿಂದ ತುಂಬಿರುತ್ತವೆ. ಇದು ನಿಮ್ಮ ಜೀವಕೋಶಗಳಲ್ಲಿ ಉರಿಯೂತವನ್ನು ಕಡಿಮೆ ಮಾಡಿ ಮೈಗ್ರೇನ್ನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹಾಗಾಗಿ ಮೈಗ್ರೇನ್ ಬರುತ್ತಿದ್ದಂತೆ , ನೈಸರ್ಗಿಕ ಪರಿಹಾರಕ್ಕಾಗಿ ನಿಂಬೆ ಮಾತ್ರೆ ಸೇವಿಸಲು ಪ್ರಯತ್ನಿಸಿ.
ಅಧಿಕ ರಕ್ತದೊತ್ತಡ ತಲೆನೋವು
ಇಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಕಾಯಿಲೆ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದಾಗಿ ತೀವ್ರವಾದ ತಲೆ ನೋವು, ವಾಕರಿಕೆ, ಉಸಿರಾಟದ ತೊಂದರೆಯಂತಹ ಸಮಸ್ಯೆ ಉಂಟಾಗುತ್ತದೆ.ಹೀಗಾಗಿ ದೇಹವನ್ನು ನೈಸರ್ಗಿಕ ವಾಗಿ ತಂಪಾಗಿಸಲು ಮತ್ತು ತಲೆನೋವಿನ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸೌತೆಕಾಯಿ ರಸವನ್ನು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಸೌತೆಕಾಯಿಯು ಎಲೆಕ್ಟ್ರೋಲೈಟ್ಗಳು ಮತ್ತು ಪೊಟ್ಯಾಸಿಯಮ್ನಿಂದ ತುಂಬಿರುತ್ತದೆ. ಇದು ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ಮತ್ತು ಆರೋಗ್ಯಕರ ರಕ್ತದ ಹರಿವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ತೀವ್ರ ಒತ್ತಡದಿಂದ ತಲೆನೋವು
ಇಂಟರ್ನ್ಯಾಷನಲ್ ಜರ್ನಲ್ ಆಫ್ ಹೆಡ್ಏಕ್ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ ದೀರ್ಘಕಾಲದ ಒತ್ತಡವು ತಲೆ ನೋವಿಗೆ ಮುಖ್ಯ ಕಾರಣವಾಗಿದೆ ಎಂದು ವರದಿ ಮಾಡಿದೆ. ಒತ್ತಡವು ಹೆಚ್ಚಾದಂತೆ ಅದು ನರಮಂಡಲದ ಮೇಲೆ ಸಮಸ್ಯೆ ಒಡ್ಡಿ ಮೆದುಳು ಮತ್ತು ದೇಹದ ಉಳಿದ ಭಾಗಗಳಿಗೆ ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ಈ ಅಸಮತೋಲನವು ತಲೆ ನೋವು ಅಥವಾ ಒತ್ತಡಕ್ಕೆ ಕಾರಣವಾಗಬಹುದು. ಹೀಗಾಗಿ ಈ ಪರಿಹಾರಕ್ಕಾಗಿ ತಜ್ಞರು ಬಾಳೆಹಣ್ಣು ತಿನ್ನಲು ಸೂಚಿ ಸುತ್ತಾರೆ..ಬಾಳೆಹಣ್ಣುಗಳು ಮೆಗ್ನೀಸಿಯಮ್ನ ಉತ್ತಮ ನೈಸರ್ಗಿಕ ಮೂಲವಾಗಿದ್ದು ಇದು ಆರೋಗ್ಯಕರ ನರ ಕಾರ್ಯ ಮತ್ತು ಸ್ನಾಯುಗಳ ವಿಶ್ರಾಂತಿಗೆ ಅಗತ್ಯವಾದ ಆಹಾರವಾಗಿದೆ.
ಸೈನಸ್ ತಲೆನೋವು
ಇತ್ತೀಚಿಗೆ ಸಾಕಷ್ಟು ಜನರು ಸೈನಸ್ ಸಮಸ್ಯೆಯಿಂದ ಬಳಲುತ್ತಿರುವುದನ್ನು ನಾವು ಕಾಣುತ್ತೇವೆ. ಹಣೆ ಹಾಗೂ ಮುಖದ ಹಿಂಭಾಗದಲ್ಲಿ ಹೆಚ್ಚು ಶೀತ ಶೇಖರಗೊಳ್ಳುವುದರಿಂದ ತಲೆನೋವು, ಉಸಿರಾಟದ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆ ಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿ ದಾಳಿಂಬೆ ಯನ್ನು ಆಹಾರದಲ್ಲಿ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ, ದಾಳಿಂಬೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹಾಗಾಗಿ ಸೈನಸ್ ನಂತಹ ತಲೆನೋವನ್ನು ತಡೆಗಟ್ಟುವಲ್ಲಿ ದಾಳಿಂಬೆ ಹಣ್ಣನನ್ನು ಸೇವಿಸಲು ತಜ್ಞರು ಸಲಹೆ ನೀಡಿದ್ದಾರೆ.