ಹಿರಿಯೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜೆ.ಸೋಮಶೇಖರ್ ಅವರು ಹೊಸಯಳನಾಡು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಟಿ.ಶ್ರೀನಿವಾಸ್ ಅವರನ್ನು ಅವರು ಇಲಾಖಾ ವಿಚಾರಣೆ ಕಾಯ್ದಿರಿಸಿ ಜೂನ್ 17ರಂದು ಅಮಾನತುಮಾಡಿದ್ದಾರೆ.!
ಹಿಂದೂ ಧರ್ಮೀಯರಸ್ಮಶಾನಕ್ಕೆ ಮೀಸಲಿಟ್ಟಿದ್ದ ಭೂಮಿಯಲ್ಲಿ 7,200 ಅಡಿ ಜಾಗವನ್ನು ಕೆ.ರವಿಕುಮಾರ್ ಎನ್ನುವವರಿಗೆ ಅಕ್ರಮವಾಗಿ ಇ-ಸ್ವತ್ತು ಮಾಡಲಾಗಿದೆ ಎಂಬ ವಿಚಾರ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ, ಅವರನ್ನು ವಜಾ ಮಾಡುವ ಸಂಬಂಧ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಈ ನಿವೇಶನವನ್ನು ರವಿಕುಮಾರ್ ಅವರು ಚಿನ್ನಸ್ವಾಮಿ ಎಂಬುವವರಿಗೆ ಇ-ಸ್ವತ್ತು ಮಾಡಿಕೊಟ್ಟಿದ್ದರು.
‘ಶ್ರೀನಿವಾಸ್ ಅವರು ಪಂಚಾಯಿತಿಯ ನಡಾವಳಿ ಪುಸ್ತಕ ಪರಿಶೀಲಿಸದೇ, ಕಂದಾಯ ಇಲಾಖೆಗೆ ಸಂಬಂಧಪಟ್ಟ ಸರ್ಕಾರಿ ಜಾಗವನ್ನು ನೇರವಾಗಿ, ಮ್ಯುಟೇಷನ್ ಬದಲಾಯಿಸಿಕೊಟ್ಟು ಚಿನ್ನಸ್ವಾಮಿ ಅವರಿಗೆ ಇ-ಸ್ವತ್ತು ಮಾಡಿಕೊಟ್ಟಿದ್ದರು. ಕರ್ತವ್ಯಲೋಪ ಎಸಗಿರುವ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ಬಂದಿದ್ದ ಲಿಖಿತ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.