ತೆಲಂಗಾಣ: ಎಂದಿನಂತೆ ಬೆಳಗ್ಗಿನ ಜಾವ ಬೇಗ ಎದ್ದು ವಾಕಿಂಗ್ ಗೆಂದು ಹೊರಟಿದ್ದ ತೆಲಂಗಾಣದ ಡಿವೈಎಸ್ಪಿ ಒಬ್ಬರ ಪಾಲಿಗೆ ಬಸ್ ಯಮನಾಗಿ ಬಂದಿದೆ. ರಸ್ತೆ ಖಾಲಿ ಇದ್ದ ಕಾರಣ ಬೇಕಾಬಿಟ್ಟಿಯಾಗಿ ಬಸ್ ಚಲಾಯಿಸಿದ ಚಾಲಕನಿಂದಾಗಿ ಒಂದು ಪ್ರಾಣವೇ ಹೋಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಹಯಾತ್ನಗರ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ 4:40 ರ ಸುಮಾರಿಗೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಟಿ.ಎನ್. ನಂದೀಶ್ವರ ಬಾಲಾಜಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಲಕ್ಷ್ಮ ರೆಡ್ಡಿ ಪಲ್ಲೆಂನಲ್ಲಿರುವ ಹನುಮಾನ್ ದೇವಸ್ಥಾನ(Temple)ದ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಪಿಎಸ್ಆರ್ಟಿಸಿ) ನುಯಿಜ್ವೀಡು ಡಿಪೋ ಬಸ್ ಅಬ್ದುಲ್ಲಾಪುರ್ಮೆಟ್ನಿಂದ ಹಯಾತ್ನಗರಕ್ಕೆ ಪ್ರಯಾಣಿಸುತ್ತಿತ್ತು. ಚಾಲಕನ ನಿರ್ಲಕ್ಷ್ಯತನ ಮತ್ತು ಅತಿ ವೇಗದ ಚಾಲನೆಯಿಂದಾಗಿ ಅಪಘಾತ ಸಂಭವಿಸಿ ಡಿವೈಎಸ್ಪಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಟಿ.ಎನ್. ನಂದೀಶ್ವರ ಬಾಲಾಜಿ ಅವರಿಗೆ ಅಪಘಾತದಿಂದಾಗಿ ಹಲವೆಡೆ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಇನ್ನೂ ಜನ ಸಂಚಾರ ಹೆಚ್ಚಿರದ ಕಾರಣ ಅವರಿಗೆ ಶೀಘ್ರದಲ್ಲಿ ವೈದ್ಯಕೀಯ ನೆರವು ಕೂಡಾ ಲಭಿಸಿಲ್ಲ. ಇದರಿಂದಾಗಿ ಅವರು ರಸ್ತೆಯಲ್ಲಿಯೇ ಒದ್ದಾಡಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತದ ಬಗ್ಗೆ ತನಿಖೆ ಆರಂಭಿಸಲಾಗಿದೆ. ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ಹಯಾತ್ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ, ಲಾತೂರ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ಬಸ್ ಟ್ರಕ್ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡ ನಂತರ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಬಸ್ನಲ್ಲಿ 13 ಪ್ರಯಾಣಿಕರಿದ್ದರು, ಅವರಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ರತ್ನಗಿರಿ-ನಾಗ್ಪುರ ಮತ್ತು ಲಾತೂರ್-ಉಮರ್ಗಾ ಹೆದ್ದಾರಿಗಳಿಗೆ ಜಂಕ್ಷನ್ ಆಗಿ ಕಾರ್ಯನಿರ್ವಹಿಸುವ ಔಸಾ ಟಿ-ಪಾಯಿಂಟ್ನಲ್ಲಿ ಸುಮಾರು 40 ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯ ನಿವಾಸಿಗಳು ಹೇಳಿಕೊಂಡಿದ್ದಾರೆ. ಇದಕ್ಕೆ ಪರಿಹಾರ ನೀಡುವ ಸಲುವಾಗಿ ಫ್ಲೈಓವರ್ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿತ್ತಾದರೂ, ಅದನ್ನು ಸರ್ಕಾರ ರದ್ದುಗೊಳಿಸಿದೆ ಎಂದು ಅವರು ಹೇಳಿದ್ದಾರೆ.