ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಿಶ್ಚಿತವಾಗಿದ್ದ ಮದುವೆಯೊಂದು ಕೊನೆ ಕ್ಷಣದಲ್ಲಿ ಮುರಿದುಬಿದ್ದ ಘಟನೆ ನಡೆದಿದೆ.
ತಾಳಿ ಕಟ್ಟುವ ಸಮಯದಲ್ಲಿ ವಧು ಪಲ್ಲವಿ, “ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ಈ ಮದುವೆ ಬೇಡ” ಎಂದು ಹಠ ಹಿಡಿದು ಮದುವೆಯನ್ನು ನಿಲ್ಲಿಸಿದ್ದಾರೆ.
ಹಾಸನ ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಮತ್ತು ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆಯ ಸರ್ಕಾರಿ ಶಾಲಾ ಶಿಕ್ಷಕ ವೇಣುಗೋಪಾಲ್.ಜಿ ಅವರ ಮದುವೆ ನಿಗದಿಯಾಗಿತ್ತು. ಪಲ್ಲವಿ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಆದರೆ, ಮುಹೂರ್ತದ ವೇಳೆಯಲ್ಲಿ ಪಲ್ಲವಿಗೆ ಬಂದ ಒಂದು ಕರೆಯ ನಂತರ ಆಕೆ ತಕ್ಷಣವೇ ಮದುವೆಯನ್ನು ನಿರಾಕರಿಸಿ, ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.
ವೇಳೆಯಲ್ಲಿ ಪಲ್ಲವಿಗೆ ಬಂದ ಒಂದು ಕರೆಯ ನಂತರ ಆಕೆ ತಕ್ಷಣವೇ ಮದುವೆಯನ್ನು ನಿರಾಕರಿಸಿ, ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.
ಪಲ್ಲವಿಯ ಈ ನಿರ್ಧಾರಕ್ಕೆ ಆಕೆಯ ಪೋಷಕರು ಶತಾಯಗತಾಯ ಮನವೊಲಿಸಲು ಪ್ರಯತ್ನಿಸಿದರೂ, ಆಕೆ “ಮದುವೆ ಬೇಡವೇ ಬೇಡ” ಎಂದು ದೃಢವಾಗಿ ಹೇಳಿದ್ದಾರೆ. ಈ ವಿಷಯ ತಿಳಿದ ವರನ ಕಡೆಯವರಾದ ವೇಣುಗೋಪಾಲ್ ಕೂಡ, “ಯುವತಿ ಹಠ ಮಾಡಿದ್ದರಿಂದ ಈ ಮದುವೆಗೆ ಒಪ್ಪಿಗೆಯಿಲ್ಲ” ಎಂದು ಹೇಳಿದ್ದಾರೆ. ಈ ಘಟನೆಯಿಂದ ಕಲ್ಯಾಣ ಮಂಟಪದಲ್ಲಿ ಆಗಮಿಸಿದ್ದ ವಧು-ವರನ ಕಡೆಯ ನೂರಾರು ಮಂದಿ ತೀವ್ರ ಆಘಾತಕ್ಕೊಳಗಾದರು.
ಸ್ಥಳಕ್ಕೆ ಬಡಾವಣೆ ಮತ್ತು ನಗರ ಠಾಣೆ ಪೊಲೀಸರು ಆಗಮಿಸಿ ಮಧ್ಯೆ ಪ್ರವೇಶಿಸಿದರಾದರೂ, ಪಲ್ಲವಿಯ ನಿರ್ಧಾರ ಬದಲಾಗಲಿಲ್ಲ. ಈ ಘಟನೆಯಿಂದ ಪಲ್ಲವಿಯ ಪೋಷಕರು ಕಣ್ಣೀರಿಟ್ಟಿದ್ದಾರೆ. ಕೊನೆಗೆ, ಮದುವೆಯ ಎಲ್ಲ ಸಿದ್ಧತೆಗಳು ವ್ಯರ್ಥವಾಗಿ, ಕಡೆಗೆ ಮದುವೆ ನಿಂತುಹೋಗಿದೆ.