ಬೆಂಗಳೂರು :ಪೈಲಟ್ಗಳು ‘ಮೇಡೇ’ ಎಂದು ಘೋಷಿಸಿದ ನಂತರ ಗುವಾಹಟಿ-ಚೆನ್ನೈ ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಮೂಲಗಳು ತಿಳಿಸಿವೆ. 168 ಪ್ರಯಾಣಿಕರಿದ್ದ ಇಂಡಿಗೋದ ಗುವಾಹಟಿ-ಚೆನ್ನೈ ವಿಮಾನವು ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ಡ್ರೀಮ್ಲೈನರ್ ವಿಮಾನವು ಕೆಲವು ದಿನಗಳ ಹಿಂದೆ ಅಹಮದಾಬಾದ್ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು. ಆ ವೇಳೆ ಕೂಡ ಪೈಲಟ್ ಮೇಡೇ ಘೋಷಿಸಿದ್ದರು. ಆದರೆ, ಅದಕ್ಕೆ ಪ್ರತಿಕ್ರಿಯಿಸುವ ಮುನ್ನ ವಿಮಾನ ಅಪಘಾತಕ್ಕೀಡಾಗಿತ್ತು. ಅದಾದ ಕೇವಲ ಒಂದು ವಾರದ ನಂತರ ಈ ಘಟನೆ ನಡೆದಿದೆ.
ಈ ಘಟನೆ ಗುರುವಾರ ರಾತ್ರಿಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. “ಮೇಡೇ ಕರೆ ಬಂದ ನಂತರ, ಎಟಿಸಿ (ವಾಯು ಸಂಚಾರ ನಿಯಂತ್ರಣ) ವಿಮಾನ ನಿಲ್ದಾಣದ ಸಿಬ್ಬಂದಿಗೆ ಎಚ್ಚರಿಕೆ ನೀಡಿತು, ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು. ಇಂಡಿಗೋ ವಿಮಾನವು ಗುರುವಾರ ರಾತ್ರಿ 8.20ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.