ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಗೂ ಮೊದಲು ಗುಜರಾತ್ನ ಅಮುಲ್ ವಿರುದ್ಧ ಸೇವ್ ನಂದಿನಿ ಅಭಿಯಾನ ಮಾಡಿ ಕನ್ನಡಿಗರ ಅಭಿಮಾನವನ್ನು ಕೆರಳಿಸಿದ್ದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಮರಳಿದ ಬಳಿಕ ಸದ್ದಿಲ್ಲದೆ ಬೆಂಗಳೂರಿನ ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ತೆರೆಯಲು ಅನುಮತಿ ನೀಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಹೊರರಾಜ್ಯದ ಅಮುಲ್ ಕಿಯೋಸ್ಕ್ಗಳನ್ನು ಸ್ಥಾಪಿಸಲಾಗಿದೆ. ಇಷ್ಟಾದರೂ ಅಧಿಕಾರ ಬರುವ ಮುಂಚೆ ಸೇವ್ ನಂದಿನಿ ಅಭಿಯಾನ ಮಾಡಿದ್ದ ಕಾಂಗ್ರೇಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಬೆಂಗಳೂರಿನ ಪ್ರಮುಖ ಸಂಚಾರ ನಾಡಿ ನಮ್ಮ ಮೆಟ್ರೋ. ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ 6-7 ಲಕ್ಷ ಮಂದಿ ಸಂಚರಿಸುತ್ತಿದ್ದಾರೆ. ಆದರೆ ಕನ್ನಡಿಗರಿಗೆ, ಕರ್ನಾಟಕದ ಬ್ರ್ಯಾಂಡ್ ನಂದಿನಿಗೆ ಬೆಂಗಳೂರು ಮೆಟ್ರೋ ನಿಗಮ ಮನ್ನಣೆ ಕೊಡದೆ ಗುಜರಾತ್ನ ಅಮುಲ್ಗೆ ಆದ್ಯತೆ ಕೊಟ್ಟು ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ತೆರೆಯಲು ಅವಕಾಶ ನೀಡಿದೆ.
ಇತ್ತೀಚಿಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ಸ್ಥಾಪಿಸುವಗಿ ಒಪ್ಪಂದಕ್ಕೆ ಬಿಎಂಆರ್ಸಿಎಲ್ ಸಹಿ ಹಾಕಿದೆ. ಈ ಬಗ್ಗೆ ಜೂನ್ 16ರಂದು ಬಿಎಂಆರ್ಸಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಗರದ ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿಗಳಲ್ಲಿ ಕಿಯೋಸ್ಕ್ಗಳು ಆರಂಭವಾಗಲಿವೆ. ಈ ಮೂಲಕ ನಮ್ಮ ರಾಜ್ಯದ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ನ ಅಮುಲ್ ಬ್ರ್ಯಾಂಡ್ ಅನ್ನು ಪ್ರಮೋಷನ್ ಮಾಡಲಾಗುತ್ತಿದೆ. ಈಗಾಗಲೇ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಕಿಯೋಸ್ಕ್ ಸ್ಥಾಪನೆಯಾಗಿದ್ದು,ಅಮುಲ್ ಮಳಿಗೆಯಲ್ಲಿ ಐಸ್ಕ್ರೀಮ್, ಚಾಕಲೇಟ್, ಸ್ಯಾಂಡ್ ವಿಚ್, ಟೀ, ಪಿಜ್ಜಾ ಸೇರಿದಂತೆ ಹಲವು ಇನ್ಸ್ಟೆಂಟ್ ತಿಂಡಿಗಳನ್ನು ಮಾರಲಾಗುತ್ತಿದೆ.
ಕಾಂಗ್ರೆಸ್ 2023ರ ಕರ್ನಾಟಕ ಚುನಾವಣೆಗೆ ಮುನ್ನ ಅಮುಲ್ ಬೆಂಗಳೂರು ಮಾರುಕಟ್ಟೆಗೆ ಪ್ರವೇಶಿಸುವುದನ್ನು ವಿರೋಧಿಸಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಸರ್ಕಾರ ಗುಜರಾತಿನ ಅಮುಲ್ಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ನಂದಿನಿ ಬ್ರ್ಯಾಂಡ್ ಮತ್ತು ಡೈರಿ ರೈತರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿ ಸೇವ್ ನಂದಿನಿ ಅಭಿಯಾನವನ್ನು ಆರಂಭಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಯಾನ ನಡೆಸಿದ್ದರು. ರಾಹುಲ್ ಗಾಂಧಿ ಸಹ ಅಭಿಯಾನದಲ್ಲಿ ಭಾಗವಹಿಸಿದ್ದರು.
ಸರ್ಕಾರದ ಈ ನಡೆಯನ್ನು ತೀಕ್ಷ್ಣವಾಗಿ ಟೀಕಿಸಿರುವ ಜೆಡಿಎಸ್, ಕಮಿಷನ್ ಆಸೆಗೆ ಸ್ವಾಭಿಮಾನ ಮಾರಿಕೊಂಡ ಡಿ.ಕೆ.ಶಿವಕುಮಾರ್. ಡೂಪ್ಲಿಕೇಟ್ ಸಿಎಂ ಡಿಕೆಶಿಯ ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ ಎಂದು ಹೇಳಿ ಈ ಹಿಂದೆ ಡಿ.ಕೆ ಶಿವಕುಮಾರ್ ಅವರು ಹೇಳಿದ್ದ ಪೋಸ್ಟನ್ನು ಹಂಚಿಕೊಂಡಿದೆ.