ಯೆಮೆನ್ : ಯೆಮೆನ್ನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಈಗ ಶಾಶ್ವತವಾಗಿ ರದ್ದುಪಡಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ, ಕಾಂತಪುರಂ ಎಪಿ ಅಬುಬಕರ್ ಮುಸ್ಲೈಯರ್ ಅವರ ಕಚೇರಿ ತಿಳಿಸಿದೆ.
ಜುಲೈ 16ರಂದು ನಿಮಿಷಾ ಪ್ರಿಯಾಳಿಗೆ ಗಲ್ಲಿಗೇರಿಸಲು ದಿನ ನಿಗದಿಯಾಗಿತ್ತು. ಆದರೆ, ಭಾರತ ಸರ್ಕಾರದ ಮನವಿ ಹಾಗೂ ಧಾರ್ಮಿಕ ಮುಖಂಡರ ಮಧ್ಯಸ್ಥಿಕೆಯ ಬಳಿಕ ಆ ಗಲ್ಲು ಶಿಕ್ಷೆ ಮುಂದೂಡಲಾಗಿತ್ತು. ಭಾರತ ಸರ್ಕಾರ ಮತ್ತು ಗ್ರ್ಯಾಂಡ್ ಮುಫ್ತಿ ಅಬುಬಕರ್ ಅಹ್ಮದ್ ಸೇರಿದಂತೆ ಹಲವಾರು ಧಾರ್ಮಿಕ ಮುಖಂಡರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ಯೆಮನ್ನ ಹೌತಿ ಅಧಿಕಾರಿಗಳು ಈ ಹಿಂದೆ ಗಲ್ಲು ಶಿಕ್ಷೆಯನ್ನು ಅಮಾನತುಗೊಳಿಸಿದ್ದರು. ಈಗ ಅದನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ನಿಮಿಷಾ ಅವರನ್ನು ಗಲ್ಲು ಶಿಕ್ಷೆಯಿಂದ ಮುಕ್ತಿಗೊಳಿಸಲಾಗಿದೆ.
‘ಈ ಹಿಂದೆ ಅಮಾನತುಗೊಂಡಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಯಿತು’ ಎಂದು ಗ್ರ್ಯಾಂಡ್ ಮುಫ್ತಿ ತಿಳಿಸಿದ್ದಾರೆ.
ಶೇಖ್ ಅಬುಬಕರ್ ಅಹ್ಮದ್ ಒಬ್ಬ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರಾಗಿದ್ದಾರೆ ಷರಿಯಾ ಕಾನೂನಿನ ಬಗ್ಗೆ ಅವರಿಗೆ ಅಘಾದವಾದ ಜ್ಞಾನವಿದ್ದು, ಅವರನ್ನು ವ್ಯಾಪಕವಾಗಿ ಗೌರವಿಸಲಾಗುತ್ತದೆ. ‘ಗ್ರಾಂಡ್ ಮುಫ್ತಿ’ ಎಂಬ ಬಿರುದು ಭಾರತದಲ್ಲಿ ಅನಧಿಕೃತವಾಗಿದ್ದರೂ, ಅವರು ಭಾರತದ ಸುನ್ನಿ ಮುಸ್ಲಿಂ ಸಮುದಾಯದಲ್ಲಿ ಮಹತ್ವದ ವ್ಯಕ್ತಿ ಎಂದು ಪರಿಗಣಿಸಲ್ಪಡುತ್ತಾರೆ. ಅವರನ್ನು ಭಾರತದ ೧೦ನೇ ಗ್ರ್ಯಾಂಡ್ ಮುಫ್ತಿ ಎಂದು ಕರೆಯಲಾಗುತ್ತದೆ.