ಬೆಂಗಳೂರು : ಆನ್ಲೈನ್ನಲ್ಲಿ ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಗಾಂಗನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೋಹದ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ನ ಇಬ್ಬರು ಯುವತಿಯರು ಸೇರಿ ಐವರನ್ನು ಆರ್ ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುಮಲತಾ ಅಲಿಯಾಸ್ ಅಂಜಲಿ (28), ಹರ್ಷಿಣಿ ಅಲಿಯಾಸ್ ಸ್ವೀಟಿ (26) ಹಾಗೂ ಅವರ ಸಹಚರರಾದ ಜಗದೀಶ್ (35), ಮಂಜುನಾಥ್ (30) ಮತ್ತು ಲೋಕೇಶ್ (32) ಎಂದು ಗುರುತಿಸಲಾಗಿದೆ.
ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಈ ಖತರ್ನಾಕ್ ಗ್ಯಾಂಗನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳು ಟೆಲಿಗ್ರಾಂ ಮೂಲಕ ಯುವಕರನ್ನು ಸಂಪರ್ಕಿಸಿ ಆನ್ಲೈನ್ನಲ್ಲಿ ಹುಡುಗಿಯರನ್ನು ಬುಕ್ ಮಾಡುವಂತೆ ಪ್ರೇರೇಪಿಸಿ, ನಂತರ ಸುಲಿಗೆ ನಡೆಸುತ್ತಿದ್ದರು.
ಡಿಸೆಂಬರ್ 1ರಂದು ಟೆಲಿಗ್ರಾಂನ ಒಂದು ಗ್ರೂಪ್ ಮೂಲಕ ಹುಡುಗಿಯನ್ನು ಬುಕ್ ಮಾಡಿದ್ದ ಯುವಕ, ಆಕೆ ನೀಡಿದ ವಿಳಾಸಕ್ಕೆ ತೆರಳಿದ್ದ. ಅಲ್ಲಿ ಆಕೆ 20 ಸಾವಿರ ರೂ. ನಗದು ಮತ್ತು ಮೊಬೈಲ್ನ್ನು ಕಿತ್ತುಕೊಂಡು, ಬಳಿಕ ‘1 ಲಕ್ಷ ರೂ. ಕೊಡು, ಇಲ್ಲವಾದರೆ ನಮ್ಮ ಕಡೆಯವರನ್ನು ಕರೆಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾಳೆ. ಈ ವೇಳೆ ಯುವಕ ತನ್ನ ಮೊಬೈಲ್ ವಾಪಸ್ ಪಡೆದು ಅಲ್ಲಿಂದ ಪರಾರಿಯಾಗಿದ್ದ.
ಮೊದಲ ಘಟನೆಯಿಂದ ಪಾಠ ಕಲಿಯದ ಯುವಕ, ಡಿಸೆಂಬರ್ 20ರಂದು ಮತ್ತೆ ಟೆಲಿಗ್ರಾಂ ಮೂಲಕ ಮತ್ತೊಬ್ಬ ಹುಡುಗಿಯನ್ನು ಬುಕ್ ಮಾಡಿದ್ದ. ಆಕೆ ಸೂಚಿಸಿದಂತೆ ಆರ್.ಆರ್ ನಗರದಲ್ಲಿರುವ ಸ್ಥಳಕ್ಕೆ ತೆರಳಿದ್ದ. ಅಲ್ಲಿ ಹಳೆಯ ಹುಡುಗಿ, ಹೊಸ ಹುಡುಗಿ ಹಾಗೂ ಮೂವರು ಯುವಕರು ಏಕಾಏಕಿ ಆಗಮಿಸಿ ಯುವಕನ ಮೇಲೆ ಹಲ್ಲೆ ನಡೆಸಿ 20 ಸಾವಿರ ರೂ. ಕಸಿದುಕೊಂಡಿದ್ದಾರೆ. ಜೊತೆಗೆ 1 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ.
ಯುವಕ ಕೂಗಿಕೊಂಡಾಗ ಸ್ಥಳೀಯರು ತಕ್ಷಣ 112ಕ್ಕೆ ಕರೆ ಮಾಡಿದ್ದು, ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಯುವಕನನ್ನು ರಕ್ಷಿಸಿದ್ದಾರೆ. ನಂತರ ಆರ್ಆರ್ ನಗರ ಪೊಲೀಸರು ಆರೋಪಿಗಳನ್ನು ಅಲ್ಲಿಯೇ ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

































