‘ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಒಬ್ಬ ದಲಿತ ನಾಯಕನಿಗೆ ಬಿಟ್ಟುಬಿಡಿ’- ವಿಜಯೇಂದ್ರಗೆ ಸಿಎಂ ತಿರುಗೇಟು

WhatsApp
Telegram
Facebook
Twitter
LinkedIn

ಬೆಂಗಳೂರು : ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಸಲಹೆ ನೀಡುತ್ತಿರುವುದು ಅವರ ಅಜ್ಞಾನ ಮತ್ತು ಅತ್ಮವಂಚನೆಯನ್ನು ಮಾತ್ರವಲ್ಲ, ದುರಹಂಕಾರವನ್ನೂ ಸೂಚಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಖರ್ಗೆ ಪಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂಬ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಮಾಧ್ಯಮ ಪ್ರಕಟನೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ವಿಜಯೇಂದ್ರ ಅವರಿಗೆ ಓದುವ ಅಭ್ಯಾಸ ಇದ್ದರೆ ಈ ದೇಶದ ಹಿಂದುಳಿದ ಜಾತಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಭಾರತೀಯ ಜನತಾ ಪಕ್ಷ ಯಾವ ಯಾವ ಕಾಲದಲ್ಲಿ ಹೇಗೆಲ್ಲಾ ನಡೆಸಿಕೊಂಡಿದೆ ಎಂಬ ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ.

ಬಂಡಾರು ಲಕ್ಷ್ಮಣ ಎಂಬ ಅಮಾಯಕ ದಲಿತ ನಾಯಕನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ತಳ್ಳಿದ್ದು ಮಾತ್ರವಲ್ಲ, ಅದೇ ಕೊರಗಿನಲ್ಲಿ ಅವರು ಸಾಯುವಂತೆ ಮಾಡಿದವರು ಯಾರು? ಮಾತೆತ್ತಿದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಮೆರೆಸುವ ಬಿಜೆಪಿ ಅವರನ್ನೇ ಪ್ರಧಾನಮಂತ್ರಿ ಯಾಕೆ ಮಾಡಿಲ್ಲ? ಎ.ಪಿ.ಜೆ ಅಬ್ದುಲ್ ಕಲಾಮ್ ಅವರನ್ನು ರಾಷ್ಟ್ರಪತಿ ಮಾಡಿದ್ದೇ ಸಾಧನೆ ಎಂದು ಹೇಳಿಕೊಳ್ಳುವವರು, ಪ್ರಸಕ್ತ ಲೋಕಸಭೆಯಲ್ಲಿ ಬಿಜೆಪಿಗೆ ಸೇರಿರುವ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಯಾಕೆ ಇಲ್ಲ? ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವೇ? ಎಂದು ಸವಾಲು ಹಾಕಿದರು.

ಹಿಂದುಳಿದ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಾ ಬಂದಿದೆ ಎನ್ನುವುದಕ್ಕೆ ರಾಜ್ಯದ ಹಿಂದುಳಿದ ಜಾತಿಗಳ ನಾಯಕ ಎಸ್.ಬಂಗಾರಪ್ಪನವರೇ ಸಾಕ್ಷಿ. ಬಂಗಾರಪ್ಪನವರನ್ನು ನಿಮ್ಮ ತಂದೆ ಬಿ.ಎಸ್. ಯಡಿಯೂರಪ್ಪನವರು ಮುಗಿಸಿದರೆ, ಅವರ ಮಗ ಕುಮಾರ್ ಬಂಗಾರಪ್ಪನವರ ರಾಜಕೀಯವನ್ನು ನೀವು ಮುಗಿಸಲು ಹೊರಟಿದ್ದೀರಿ. ಇದರ ವಿವರವನ್ನು ಅವರು ನೀಡುತ್ತಲೇ ಇದ್ದಾರೆ. ಬಂಗಾರಪ್ಪನವರಿರಲಿ, ನರೇಂದ್ರ ಮೋದಿ ಅವರೇ ಇರಲಿ, ಎಲ್ಲಿಯ ವರೆಗೆ ಇವರು ವರ್ಣವ್ಯವಸ್ಥೆ ಆಧಾರಿತ ಹಿಂದುತ್ವದ ಅಜೆಂಡಾಕ್ಕೆ ತಲೆ ಬಗ್ಗಿಸುತ್ತಾ ಇರುತ್ತಾರೋ ಅಲ್ಲಿಯ ವರೆಗೆ ಮಾತ್ರ ಅವರ ತಲೆಗಳು ಸುರಕ್ಷಿತ. ಇದು ಮೋದಿಯವರಿಗೂ ತಿಳಿದಿರಲಿ ಎಂದಿದ್ದಾರೆ.

ವಿಜಯೇಂದ್ರ ಅವರೇ, ದಲಿತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ನಿಮಗೆ ಅಷ್ಟೊಂದು ಅಕ್ಕರೆ, ಕಾಳಜಿಗಳಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಒಬ್ಬ ದಲಿತ ನಾಯಕನಿಗೆ ಬಿಟ್ಟುಬಿಡಿ. ನಿಮಗೆ ಅನುಕೂಲವಾಗಲೆಂದು ಆ ಹೆಸರನ್ನು ನಾನೇ ಸೂಚಿಸುತ್ತೇನೆ. ದಲಿತ ನಾಯಕ ಗೋವಿಂದ ಕಾರಜೋಳ ಅವರು ಇತ್ತೀಚೆಗೆ ನಿಮ್ಮ ಸಂಗಕ್ಕೆಬಿದ್ದು ಇತ್ತೀಚೆಗೆ ಏನೇನೋ ಮಾತನಾಡುತ್ತಿದ್ದಾರೆ. ಆದರೆ ನನ್ನ ಸಹದ್ಯೋಗಿಯಾಗಿದ್ದ ಅವರು ಮೂಲತ: ಸಜ್ಜನ ವ್ಯಕ್ತಿ. ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ದಮ್ಮು ತಾಕತ್ ಇದ್ದರೆ ಕಾರಜೋಳ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಬೇಡಿ. ಇಂತಹ ಒಳ್ಳೆಯ ಕೆಲಸವನ್ನು ನೀವು ಮಾಡುವುದೇ ಇಲ್ಲ ಎನ್ನುವುದು ನನಗೆ ಗೊತ್ತು ಎಂದರು.

ಬೇರೆ ಪಕ್ಷಗಳಲ್ಲಿನ ದಲಿತ ನಾಯಕರ ಚಾರಿತ್ರ್ಯಹನನ ಮಾಡಲಷ್ಟೇ ಬಿಜೆಪಿ ತನ್ನ ದಲಿತ ನಾಯಕರನ್ನು ಬಳಸಿಕೊಳ್ಳುತ್ತದೆಯೇ ಹೊರತು, ಅವರಿಗೆ ಯಾವುದೇ ಗೌರವದ ಮತ್ತು ಪ್ರಮುಖ ಸ್ಥಾನಮಾನ ನೀಡುವುದಿಲ್ಲ. ವಿಜಯೇಂದ್ರ ಅವರೇ, ಛಲವಾದಿ ನಾರಾಯಣ ಸ್ವಾಮಿ ಅವರ ತಲೆ ಮೇಲೆ ಚಡ್ಡಿತುಂಬಿದ ಬುಟ್ಟಿಹೊರಿಸಿ ಕಳಿಸುವ ಬದಲಿಗೆ ನೀವು ಮತ್ತು ನಿಮ್ಮ ತಂದೆಯವರು ಯಾಕೆ ಅದನ್ನು ಹೊತ್ತುಕೊಂಡು ಹೋಗಿಲ್ಲ? ಇದಕ್ಕೆ ಉತ್ತರ ಇದೆಯಾ ನಿಮ್ಮಲ್ಲಿ? ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು ಮಾತ್ರವಲ್ಲ ದೇಶ ಮೆಚ್ಚುವ ಒಬ್ಬ ಮುತ್ಸದ್ದಿ ನಾಯಕ. ಶ್ರದ್ಧೆ, ಶ್ರಮ ಮತ್ತು ಜನಪಪರಕಾಳಜಿ ಮೂಲಕ ಅವರು ನಾಯಕರಾಗಿ ಬೆಳೆದಿದ್ದಾರೆಯೇ ಹೊರತು, ಎಂದೂ ದಲಿತ ಕಾರ್ಡ್ ಪ್ರದರ್ಶಿಸಿ ರಾಜಕೀಯ ಮಾಡಿಲ್ಲ. ಅವರ ಬೆಳವಣಿಗೆಗೆ ಯಾರ ಶಿಫಾರಸುಗಳ ಅಗತ್ಯವೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಮಂತ್ರಿ ಯಾರು ಆಗಬೇಕೆನ್ನುವುದನ್ನು ನಮ್ಮ ಪಕ್ಷ ನಿರ್ಧರಿಸುತ್ತದೆ ಎಂದರು.

ಅದರ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ‍್ಳುವ ಅಗತ್ಯ ಇಲ್ಲ. ವಿಜಯೇಂದ್ರ ಅವರೇ ನೀವು ಯೋಚಿಸಬೇಕಾಗಿರುವುದು ನಿಮ್ಮ ಪಕ್ಷದ ಬಗ್ಗೆ. ಎಪ್ಪತ್ತೈದು ವರ್ಷ ತುಂಬಿರುವ ನರೇಂದ್ರ ಮೋದಿ ಅವರ ಪದಚ್ಯುತಿಯ ಸೂಚನೆಯನ್ನು ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ನೀಡಿದ್ದಾರೆ. ದಲಿತ ಪ್ರಧಾನಮಂತ್ರಿಯನ್ನು ಮಾಡಲು ಬಿಜೆಪಿಗೆ ಇದೊಂದು ಸದಾವಕಾಶ. ಆ ಪ್ರಯತ್ನ ನಿಮ್ಮಿಂದಲೇ ಶುರುವಾಗಲಿ. ಬೇರೆಯವರಿಗೆ ಬೋಧನೆ ಮಾಡುವ ಬದಲಿಗೆ ಬಿಜೆಪಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಒಬ್ಬ ದಲಿತ ನಾಯಕನನ್ನು ನೀವೇ ಮೊದಲೇ ಸೂಚಿಸಿ ನಿಮ್ಮ ದಲಿತ ಪ್ರೇಮವನ್ನು ಸಾಬೀತುಪಡಿಸಿ. ಆ ಹೆಸರುಗಳು ಗೋವಿಂದ ಕಾರಜೋಳ ಅವರೋ, ಛಲವಾದಿ ನಾರಾಯಾಣ ಸ್ವಾಮಿ ಅವರದ್ದಾಗಿದ್ದರೆ ಅವರನ್ನು ಅಭಿನಂದಿಸುವರಲ್ಲಿ ನಾನು ಮೊದಲಿಗನಾಗುತ್ತೇನೆ ಎಂದಿದ್ದಾರೆ.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon