ಮಂಗಳೂರು: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ದಕ್ಷಿಣ ಕನ್ನಡದ ಹಲವು ಕಡೆ ಅನಾಹುತಗಳು ಸಂಭವಿಸಿವೆ. ಕೆಲವೆಡೆ ಗುಡ್ಡ ಕುಸಿತ ಉಂಟಾಗಿದೆ. ಈಗಾಗಲೇ ಮಳೆ ಅನಾಹುತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉಳ್ಳಾಲದ ದೇರಳಕಟ್ಟೆ ಮೊಂಟೆಪದವಿನ ಪಂಬದ ಹಿತ್ಲುವಿನಲ್ಲಿ ಗುಡ್ಡ ಕುಸಿದು ಮಣ್ಣು ಮನೆಗಳ ಮೇಲೆ ಬಿದ್ದಿದೆ. ಮನೆಗಳ ಅಡಿಯಲ್ಲಿ ಒಂದೇ ಕುಟುಂಬದ ಐವರು ಸಿಲುಕಿಕೊಂಡಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಕುಸಿದ ಮನೆಯಡಿ ತಾಯಿ ಹಾಗೂ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಭಾರೀ ಮಳೆಗೆ ಗುಡ್ಡ ಕುಸಿದಿದ್ದು, ಕುಸಿದ ಗುಡ್ಡದಡಿ ನೆಲಕಚ್ಚಿದ ಮನೆಯಡಿ ಸಿಲುಕಿದ ಒಂದೇ ಕುಟುಂಬದ ಐವರ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದಿದ್ದು, ಕಾಂತಪ್ಪ ಪೂಜಾರಿ ಪತ್ನಿ ಪ್ರೇಮ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಒಳಗೆ ಮಲಗಿದ್ದ ತಾಯಿ ಮಗುವಿನ ಮೇಲೆ ಮನೆಯ ಮೇಲ್ಚಾವಣಿ ಬಿದ್ದಿದೆ. ಗೋಡೆಯ ಅರ್ಧಭಾಗ ಇಬ್ಬರ ದೇಹದ ಮೇಲೆ ಬಿದ್ದಿದ್ದು, ರಕ್ಷಣಾ ತಂಡ ಇಬ್ಬರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದೆ. ಅಶ್ವಿನಿ ಎಂಬ ಮಹಿಳೆ ಹಾಗೂ ಆಕೆಯ ಒಂದು ವರ್ಷದ ಮಗು ಆರುಷ್ ಮನೆಯ ಮೇಲ್ಚಾವಣಿ ಅಡಿ ಸಿಲುಕಿದ್ದಾರೆ. ಮಗುವಿನ ಕೈ ಹಾಗೂ ಮುಖ ಹೊರಗೆ ಕಾಣ್ತಿದ್ದು, ತಾಯಿ ಮಗುವನ್ನು ರಕ್ಷಣಾ ತಂಡ ಸಂಪರ್ಕಿಸಿದೆ. ಒಳಗಡೆ ಸಿಲುಕಿ ನರಳುತ್ತಿರುವ ತಾಯಿ, ಮಗುವಿಗೆ ಆಕ್ಸಿಜನ್ ಪೂರೈಕೆ ಮಾಡಲಾಗ್ತಿದೆ.