ಮಂಗಳೂರು: ನಿಜಕ್ಕೂ ಇಂದು ಸ್ಫೂರ್ತಿದಾಯಕ ಸ್ಟೋರಿ. ಇವತ್ತಿನ ಸಮಾಜದಲ್ಲಿ ಮಂಗಳಮುಖಿಯರು ಅಂದ್ರೆ ಸಾಕು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ. ಆದರೆ ಅವರಲ್ಲೂ ಒಳ್ಳೆಯ ರೀತಿಯಲ್ಲಿ ಬದುಕು ಕಟ್ಟಿಕೊಂಡವರು ಇದ್ದಾರೆ ಎಂಬುವುದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್…ಅಲ್ಲದೇ ಪ್ರತಿಯೊಬ್ಬರಿಗೂ ಈ ಸ್ಟೋರಿ ಇನ್ಸ್ಪಿರೇಷನ್…
ಅಂದ್ಹಾಗೆ ಈಕೆಯ ಹೆಸರು ಅನಿ ಅಂತ, ಮೂಲತಃ ರಾಯಚೂರಿನವರು. ಮಂಗಳೂರಿಗೆ ವಿದ್ಯಾಭ್ಯಾಸಕ್ಕೆಂದು ಬಂದ ಇವರು ಇದೀಗ ಇಲ್ಲೇ ನೆಲೆ ನಿಂತಿದ್ದಾರೆ. ಬಿಎ ಬಳಿಕ ಬಿಎಡ್ ಎರಡು ಸೆಮಿಸ್ಟರ್ ಬರೆದ ಇವರು ಮಂಗಳಮುಖಿಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಕಷ್ಟ ಎಂದು ಅರಿತು ಶಿಕ್ಷಣ ಮೊಟಕುಗೊಳಿಸಿದ್ದರು.
ಇನ್ನು ಮಂಗಳೂರಿನಲ್ಲಿ ಓಡಾಡುವ ವೇಳೆ ಅವರನ್ನು ಆಟೋ ಚಾಲಕರು ತಮ್ಮ ಆಟೋಗಳಿಗೆ ಹತ್ತಿಸಿಕೊಳ್ಳದೇ ಅವಮಾನ ಮಾಡುತ್ತಿದ್ದರಂತೆ. ಇದೇ ರೀತಿಯ ಪದೇ ಪದೇ ಅವಮಾನ ಅನುಭವಿಸಿದ ಅನಿ ಗಟ್ಟಿ ನಿರ್ಧಾರವೊಂದು ಮಾಡುತ್ತಾರೆ. ತಾವೇ ಆಟೋರಿಕ್ಷಾ ಖರೀದಿಸಿ ಬಾಡಿಗೆ ನೀಡಲು ಪ್ಲ್ಯಾನ್ ಮಾಡುತ್ತಾರೆ. ಅದರಂತೆ, ಅವರು ಬ್ಯಾಂಕ್ನಲ್ಲಿ ಸಾಲ ಮಾಡಿ ನಾಲ್ಕು ರಿಕ್ಷಾಗಳನ್ನು ಖರೀದಿಸಿದ್ದಾರೆ. ನಾಲ್ಕು ರಿಕ್ಷಾಗಳನ್ನು ಮಂಗಳೂರಿನ ಗ್ರಾಮಾಂತರ ಭಾಗವಾದ ದೇರಳಕಟ್ಟೆಯಲ್ಲಿ ಬಾಡಿಗೆಗೆ ನೀಡಿದ್ದಾರೆ. ಇದರಿಂದ ಅವರಿಗೆ ಒಂದು ನಿಶ್ಚಿತ ಆದಾಯವೂ ಬರುತ್ತಿದೆ. ತನಗೆ ರಿಕ್ಷಾ ಹತ್ತಿಸಿಕೊಳ್ಳದೆ ಆದ ಅವಮಾನ, ಸಂಕಷ್ಟ ಬೇರೆ ಮಂಗಳಮುಖಿಯರಿಗೆ ಬರಬಾರದೆಂದು ಅನಿ ಅವರು ಈ ನಿರ್ಧಾರ ಮಾಡಿದ್ದಾರೆ.
ಇನ್ನು ತಾವು ಬಾಡಿಗೆಗೆ ಬಿಟ್ಟಿರುವ ಆಟೋದಲ್ಲಿ ಪ್ರಯಾಣಿಸುವ ಗರ್ಭಿಣಿಯರಿಗೆ ಮತ್ತು ಹಿರಿಯ ಮಂಗಳಮುಖಿಯರಿಗೆ ರಿಕ್ಷಾದಲ್ಲಿ ಸೇವೆ ಉಚಿತವಾಗಿರಲಿದೆ. ಈ ನಾಲ್ಕು ರಿಕ್ಷಾದಲ್ಲಿಯೂ ಉಚಿತ ಸೇವೆ ಇರಲಿದೆ. ಈ ಬಗ್ಗೆ ತಮ್ಮ ಎಲ್ಲಾ ರಿಕ್ಷಾ ಚಾಲಕರಿಗೆ ಅನಿ ಅವರು ನಿರ್ದೇಶನ ಸಹ ನೀಡಿದ್ದಾರೆ. ಅಲ್ಲದೇ, ಕಷ್ಟದಲ್ಲಿರುವವರಿಗೆ ಸಹಾಯ ಹಾಗೂ ನಿರ್ಗತಿಕರಿಗೆ ಅನ್ನದಾನವನ್ನು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಆ ಮೂಲಕ ಮಂಗಳಮುಖಿಯರೂ ಹೀಗೂ ಮಾದರಿಯಾಗಿ ಬದುಕಬಹುದು ಎಂಬುವುದನ್ನು ಅನಿ ತೋರಿಸಿಕೊಟ್ಟಿದ್ದಾರೆ.