ಮಂಗಳೂರು: ನಗರದ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ನ ಫಾಜಿಲ್ ಎಂಬಾತನ ಹತ್ಯೆ ಮಾಡಲಾಗಿತ್ತು. ಇದೇ ಸೇಡಿಗೆ ಈಗ ಸುಹಾಸ್ ಶೆಟ್ಟಿ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನೀಶ್’ ಅಂತ ಸೋಶಿಯಲ್ ಮೀಡಿಯಾದಲ್ಲಿ ಅದೊಂದು ಪೋಸ್ಟ್ ವೈರಲ್ ಆಗಿದ್ದು, ಸದ್ಯ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಮಾರ್ಚ್ 31ರಂದೇ ಸುಹಾಸ್ ಶೆಟ್ಟಿ ಹತ್ಯೆಗೆ ಮುಹೂರ್ತ ಫಿಕ್ಸ್ ಆಗಿತ್ತಾ ಎಂಬ ಅನುಮಾನಗಳು ಸದ್ಯ ಹುಟ್ಟಿಕೊಂಡಿವೆ. ಏಕೆಂದರೆ ಅಂದೇ ಟಾರ್ಗೆಟ್ ಕಿಲ್ಲರ್-03 ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಸುಹಾಸ್ ಶೆಟ್ಟಿ ಫೋಟೋ ಹಾಕಿ ಶೀಘ್ರದಲ್ಲೇ ಸೇಡು ತೀರಿಸಿಕೊಳ್ಳುವುದಾಗಿ ಪ್ರಚೋದನಕಾರಿ ಪೋಸ್ಟ್ ಹಾಕಲಾಗಿತ್ತು.
ಇತ್ತ ಸುಹಾಸ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ Troll_mayadiaka ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ‘ಫಿನೀಶ್’ ಅಂತ ಪೋಸ್ಟ್ ಬಹಿರಂಗವಾಗಿತ್ತು. ಮಂಗಳೂರಿನಿಂದಲೇ ಹಲವು ನಕಲಿ ಇನ್ಸ್ಟಾಗ್ರಾಂ ಪೇಜ್ಗಳನ್ನು ನಿಯಂತ್ರಣ ಮಾಡಲಾಗುತ್ತಿದೆ. ಹತ್ಯೆ ಬೆನ್ನಲ್ಲೇ ವಿಡಿಯೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಲಾಗಿದೆ. ಜೊತೆಗೆ ‘Waiting for next wicket’ ಅಂತ ಪೋಸ್ಟ್ ಮಾಡಲಾಗಿದೆ.
ಕೊಲೆಯಾದ ಸುಹಾಸ್ ಶೆಟ್ಟಿ ಹಿಂದೂ ಕಾರ್ಯಕರ್ತನಾಗಿದ್ದ. ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. ಸುಹಾಸ್ ಶೆಟ್ಟಿ ವಿರುದ್ಧ ಒಟ್ಟು 5 ಪ್ರಕರಣಗಳಿದ್ದವು. ಬಜಪೆ ಠಾಣೆಯಲ್ಲಿ 3, ಬೆಳ್ತಂಗಡಿ, ಸುರತ್ಕಲ್ ಠಾಣೆಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿದ್ದವು. ಒಂದು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದು, ಇನ್ನೆರಡು ವಿಚಾರಣೆ ಹಂತದಲ್ಲಿದ್ದವು. ಮತ್ತು ಎರಡರಲ್ಲಿ ಖುಲಾಸೆಗೊಂಡಿದ್ದರು.
ಕೊಲೆ, ಕೊಲೆಗೆ ಯತ್ನ ಆರೋಪ ಹಿನ್ನಲೆ ಪೊಲೀಸರು ರೌಡಿಶೀಟ್ ಓಪನ್ ಮಾಡಿದ್ದರು. ಸುರತ್ಕಲ್ನಲ್ಲಿ ನಡೆದಿದ್ದ ಫಾಜಿಲ್ ಕೊಲೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ A1 ಆರೋಪಿಯಾಗಿದ್ದರು. ಮಾರ್ಚ್ನಲ್ಲಿ ಹೈಕೋರ್ಟ್ನಿಂದ ಜಾಮೀನು ಪಡೆದು ಹೊರ ಬಂದಿದ್ದರು.
ಹಂತಕರು ಪಕ್ಕಾ ಪ್ಲ್ಯಾನ್ ಮಾಡಿಯೇ ಸುಹಾಸ್ ಶೆಟ್ಟಿಯ ಕತೆ ಮುಗಿಸಿದ್ದಾರೆ. ನಿನ್ನೆ ರಾತ್ರಿ 8.30ರ ಸುಮಾರು ಸುಹಾಸ್ ಶೆಟ್ಟಿ ತನ್ನ ಸಹಚರರ ಜೊತೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮೀನಿನ ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರಿನ ಮೂಲಕ ಸುಹಾಸ್ ಕಾರನ್ನ ಚೇಸ್ ಮಾಡಿದ್ದಾರೆ. ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಬಳಿ, ಮೀನಿನ ಟೆಂಪೋ ಮೂಲಕ ಸುಹಾಸ್ ಕಾರಿಗೆ ಡಿಕ್ಕಿಹೊಡೆದಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಸುಹಾಸ್ ಕಾರು ಸಲೂನ್ಗೆ ನುಗ್ಗಿದೆ. ಇದೇ ವೇಳೆ ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರು ಹಂತಕರು ಮಾರಕಾಸ್ತ್ರಗಳನ್ನ ಹಿಡಿದು ಸಾರ್ವಜನಿಕರ ಕಣ್ಣೆದುರೇ ಸುಹಾಸ್ ಮೇಲೆ ಮುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಕೊಚ್ಚಿಕೊಂದಿದ್ದಾರೆ.