ಬೆಂಗಳೂರು: ಕನ್ನಡ ಭಾಷೆ ದೂಷಿಸಿದ ಪರಭಾಷಾ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಿಗರು ಕೆರಳಿ ನಿಂತಿದ್ದಾರೆ. ಬಾಲಿವುಡ್ ಸಿಂಗರ್ ಸೋನು ನಿಗಮ್ ಆಡಿರುವ ಮಾತುಗಳು ಕನ್ನಡಿಗರ ತಾಳ್ಮೆ ಪರೀಕ್ಷಿಸಿವೆ. ಮಾತ್ರವಲ್ಲ, ಇದಕ್ಕೆೆ ಪ್ರತಿಭಟನೆ ವ್ಯಕ್ತವಾದ ಬಳಿಕ ಮಾಡಿಕೊಂಡ ಸ್ಪಷ್ಟೀಕರಣವೂ ಕನ್ನಡಿಗರನ್ನು ಮತ್ತಷ್ಟು ಕೆಣಕುವಂತಿತ್ತು. ಈ ಹಿನ್ನೆಲೆಯಲ್ಲಿ ಇಂದು ಕನ್ನಡ ಹೋರಾಟಗಾರರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶೀಘ್ರವೇ ಸೋನು ನಿಗಮ್ ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಹೋರಾಟದಲ್ಲಿ ಹಲವು ಕನ್ನಡ ಸಂಘಟನೆಗಳು ಪಾಲ್ಗೊಳ್ಳುತ್ತಿವೆ.
ಕನ್ನಡ ಭಾಷೆಗೂ ಪಹಲ್ಗಾಮ್ ದಾಳಿಗೂ ಹೋಲಿಕೆ ಮಾಡಿರುವ ಸೋನು ನಿಗಮ್ ವಿರುದ್ಧ ಕನ್ನಡಿಗರು, ಕನ್ನಡ ಸಂಘಟನೆಗಳು ನಿಗಿನಿಗಿ ಕೆಂಡವಾಗಿವೆ. ಇನ್ಮೇಲೆ ಕನ್ನಡ ಚಿತ್ರರಂಗದಲ್ಲಿ ಸೋನು ನಿಗಮ್ ಅವರಿಗೆ ಹಾಡು ಹಾಡೋಕೆ ಅವಕಾಶ ಕೊಡಬಾರದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಕನ್ನಡಪರ ಸಂಘಟನೆಯ ರೂಪೇಶ್ ರಾಜಣ್ಣ ದೂರು ಕೊಟ್ಟಿದ್ದಾರೆ. ಜೊತೆಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಕೂಡ ಸೋನು ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.ಫಿಲ್ಮ್ ಚೇಂಬರ್ ಉಪಾಧ್ಯಕ್ಷ, ನಿರ್ಮಾಪಕ ಸಂಘದ ಅಧ್ಯಕ್ಷರು ದೂರು ಸ್ವೀಕರಿಸಿ ಸೋನು ನಿಗಮ್ ವಿರುದ್ಧ ಕ್ರಮದ ಭರವಸೆ ನೀಡಿದರು. ಸೋಮವಾರ ಫಿಲ್ಮ್ ಚೇಂಬರ್ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕನ್ನಡ ಚಿತ್ರಗಳಲ್ಲಿ ಸೋನು ನಿಗಮ್ಗೆ ಹಾಡಲು ಅವಕಾಶ ಕೊಡಬೇಕಾ.. ಬೇಡ್ವಾ ಎಂಬ ನಿರ್ಧಾರ ಮಾಡಲಾಗುತ್ತದೆ ಎಂದಿದ್ದಾರೆ.ಕನ್ನಡ ಸಂಘಟನೆ ದೂರಿನ ಬೆನ್ನಲ್ಲೇ ಗಾಯಕ ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. BNS 351(2) ವಿವಿಧ ಗುಂಪುಗಳ ನಡುವೆ ಧ್ವೇಷ ಉತ್ತೇಜನ, BNS 352(1) ಕ್ರಿಮಿನಲ್ ಮಾನಹಾನಿ ಮಾಡುವುದು, BNS 353 ಧಾರ್ಮಿಕ, ಭಾಷಿಕ ಭಾವನೆ ಕೆರಳಿಸುವುದು- ಈ ಸೆಕ್ಷನ್ಗಳನ್ನು ದೂರಿನಲ್ಲಿ ಆಗ್ರಹಿಸಲಾಗಿದೆ. ದೂರಿನ ಬಳಿಕ ಸೋನುಗೆ ನೋಟೀಸ್ ನೀಡಲು ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗಿದೆ.


































