ಬೆಳಗಾವಿ: ನಮ್ಮ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ. ಅವತ್ತು ಬಸ್ನಲ್ಲಿ ಒಬ್ಬರು – ಇಬ್ಬರು ಇರಲಿಲ್ಲ. 90 ಜನ ಪ್ರಯಾಣಿಸುತ್ತಿದ್ದರು. ನೋಡೋಣ ಆ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇಂದು ಬೆಳಗಾವಿಗೆ ಭೇಟಿ ನೀಡಿದ್ದ ಸಚಿವರು ಹಲ್ಲೆಗೊಳಗಾದ ಕಂಡೆಕ್ಟರ್ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಡಕ್ಟರ್ ಆರೋಗ್ಯ ಸ್ಥಿರವಾಗಿದೆ. ಎರಡು ದಿನಗಳಲ್ಲಿ ಮನೆಗೆ ಕಳುಹಿಸುತ್ತಾರೆ. ನಮ್ಮ ಎಂಡಿ ಅವರು ಪ್ರತಿದಿನ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಗಲಾಟೆಯಾದ ಬಳಿಕ ಕೇಸ್ ಕೊಟ್ಟಿದ್ದಕ್ಕೆ ಗಾಬರಿಯಾಗಿದ್ದಾರೆ. ಏನೇ ಕೇಸ್ ಮಾಡಲಿ ತನಿಖೆ ಮಾಡುತ್ತಾರೆ ಎಂದರು.
ಆ ಬಸ್ನಲ್ಲಿ ಅಂದು 90 ಜನ ಇದ್ದರು. ಕರ್ನಾಟಕದಲ್ಲಿ 1,72,000 ಟ್ರಿಪ್ ಇರುತ್ತದೆ. ಈ ರೀತಿ ದೂರು 65 ವರ್ಷದಲ್ಲಿ ಕೇಸ್ ದಾಖಲಾಗಿಲ್ಲ. ಉದ್ದೇಶಪೂರ್ವಕವಾಗಿ ಕೇಸ್ ಕೊಟ್ಟಿದ್ದಾರೆ. ನಾನು ಗೃಹಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ. ಮಹದೇವಪ್ಪ ಪರವಾಗಿ ನಮ್ಮ ಇಲಾಖೆ ಇದೆ. ಸಾರ್ವಜನಿಕರೂ ಸಹ ಇದ್ದಾರೆ ಎಂದು ಹೇಳಿದರು.
ಮಹಾದೇವ ಅವರು ಕಳೆದ ಐದು ವರ್ಷಗಳಿಂದ ಅದೇ ರೂಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವತ್ತು ಇಬ್ಬರು ಹುಡುಗ – ಹುಡುಗಿ ಬಸ್ನಲ್ಲಿ ಹತ್ತಿದ್ದರು. ಇಬ್ಬರೂ ಅಪ್ರಾಪ್ತರು. ಹುಡುಗ ಕೂಡ ಜಿರೋ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಿದ್ದಾರೆ. ಆಗ ಕಂಡಕ್ಟರ್ ಕನ್ನಡದಲ್ಲಿ ಕೇಳಿದ್ದಾರೆ. ಅವರು ಮರಾಠಿಯಲ್ಲಿ ಮಾತನಾಡಿದ್ದಾರೆ. ಕಂಡಕ್ಟರ್ಗೆ ಮರಾಠಿ ಬರುವುದಿಲ್ಲ. ಅವರಿಗೆ ಕನ್ನಡ ಬರುವುದಿಲ್ಲವಂತೆ. ಹೀಗೆ ಮಾತಿಗೆ ಮಾತು ಬೆಳೆದಿದೆ. ಫೋನ್ ಮಾಡಿ ಮುಂದಿನ ನಿಲ್ದಾಣದಲ್ಲಿ ಅವರ ಕಡೆಯವರನ್ನು ಕರೆಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಬಾಳೇಕುಂದ್ರಿ ಬಳಿ ಮಧ್ಯಾಹ್ನ 1 ಗಂಟೆಗೆ ಘಟನೆ ನಡೆದಿದೆ. ಆಮೇಲೆ ನಮ್ಮ ಇಲಾಖೆಯವರು ದೂರು ಕೊಟ್ಟ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಅವರನ್ನು ಒಪ್ಪಿಸಿದ್ದಾರೆ. ಮಾರನೇ ದಿನ ಕಂಡಕ್ಟರ್ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ನೀಡಿದ್ದಾರೆ ಎಂದು ತಿಳಿಸಿದರು.