ಇಸ್ಲಾಮಾಬಾದ್ : 2001ರ ಭಾರತೀಯ ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಹಾಗೂ 26/11ರ ಮುಂಬೈ ಉಗ್ರರ ದಾಳಿಯ ರುವಾರಿ ಲಷ್ಕರ್-ಎ-ತೈಬಾದ ಪ್ರಮುಖ ಉಗ್ರ ಅಬ್ದುಲ್ ಅಜೀಜ್ ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಅಬ್ದುಲ್ ಅಜೀಜ್ ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಪ್ರಮುಖ ಹಣಕಾಸು ಕಾರ್ಯಾಚರಣಾ ಮತ್ತು ಕಾರ್ಯತಂತ್ರದ ಮಾಡ್ಯೂಲ್ ಸಂಯೋಜಕರಾಗಿದ್ದ. ಕಳೆದ ಮೇ 7 ರಂದು ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಕ್ಷಿಪಣಿ ದಾಳಿಯಿಂದ ಗಾಯಗೊಂಡಿದ್ದ ಎಂದು ಹೇಳಲಾಗಿದೆ.
ಲಷ್ಕರ್-ಎ-ತೈಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯೊಂದಿಗೆ ಅಜೀಜ್ ನಿಕಟ ಸಂಬಂಧ ಹೊಂದಿದ್ದ. ಅಬ್ದುಲ್ ಅಜೀಜ್ ಅಂತ್ಯಕ್ರಿಯೆಯಲ್ಲಿ ಸೈಫುಲ್ಲಾ ಕಸೂರಿ ಮತ್ತು ಅಬ್ದುರ್ ರೌಫ್ ಮುಂತಾದ ಹಿರಿಯ ಲಷ್ಕರ್ ನಾಯಕರು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಅಜೀಜ್ ಲಷ್ಕರ್ ಸಂಘಟನೆಗೆ ಪ್ರಮುಖ ಆರ್ಥಿಕ ಕೊಂಡಿಯಾಗಿದ್ದ. ಗಲ್ಫ್ ರಾಷ್ಟ್ರಗಳು, ಬ್ರಿಟನ್ ಮತ್ತು ಅಮೆರಿಕದಲ್ಲಿರುವ ಪಾಕಿಸ್ತಾನಿ ಸಮುದಾಯಗಳು ಮತ್ತು ಮೂಲಭೂತ ಇಸ್ಲಾಮಿಸ್ಟ್ ಗುಂಪುಗಳಿಂದ ಹಣ ಸಂಗ್ರಹಿಸುತ್ತಿದ್ದ. ಹಣಕಾಸಿನ ಹೊರತಾಗಿ, ಈತ ಲಾಜಿಸ್ಟಿಕ್ಸ್, ಶಸ್ತ್ರಾಸ್ತ್ರ ಪೂರೈಕೆ ಮತ್ತು ವಿವಿಧ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರ ನೇಮಕಾತಿಯನ್ನೂ ನಿರ್ವಹಿಸುತ್ತಿದ್ದನು.
ಅಬ್ದುಲ್ ಅಜೀಜ್ ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಆತ ನೇರವಾಗಿ ಈ ದಾಳಿಯಲ್ಲಿ ಭಾಗಿಯಾಗದೇ ಇದ್ದರೂ ಹಣ ಮತ್ತು ಸಂಪನ್ಮೂಲಗಳನ್ನು ಸುಗಮಗೊಳಿಸುವ ಮೂಲಕ ನಿರ್ಣಾಯಕ ಪಾತ್ರ ವಹಿಸುತ್ತಿದ್ದನು. 2001 ರ ಸಂಸತ್ತಿನ ದಾಳಿಗೆ ಪಾಕಿಸ್ತಾನದಿಂದ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಆತ ಸಹಾಯ ಮಾಡಿದ್ದ ಎಂದು ಗುಪ್ತಚರ ವರದಿಗಳಿಂದ ತಿಳಿದುಬಂದಿದೆ. 2006 ರ ಮುಂಬೈ ಸ್ಥಳೀಯ ರೈಲು ಸ್ಫೋಟಗಳಿಗೂ ಆತ ಹಣಕಾಸು ಒದಗಿಸಿದ್ದ ಎನ್ನಲಾಗಿದೆ. 2008 ರ ಮುಂಬೈ ದಾಳಿಯ ಸಮಯದಲ್ಲಿ, ಅಜೀಜ್ ಸಮುದ್ರ ಮಾರ್ಗಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಸೆಟಲೈಟ್ ಫೋನ್ಗಳ ವಿತರಣೆ ಮಾಡಿದ್ದ.