ನವದೆಹಲಿ: ಮುಸ್ಲಿಂ ಸಮುದಾಯ ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿದೆ. ಇದು ಸಾಮಾಜಿಕ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ವೇಳೆ ಸೋಮವಾರ ಮಾತನಾಡಿದ ಅವರು, ‘ಮಸೂದೆಯನ್ನು ಇಡೀ ಮುಸ್ಲಿಂ ಸಮುದಾಯ ತಿರಸ್ಕರಿಸಿದೆ. ಈ ಮಸೂದೆಯ ಅನುಷ್ಠಾನದಿಂದ ದೇಶವನ್ನು 1980 ಮತ್ತು 1990 ರ ದಶಕದ ಆರಂಭಕ್ಕೆ ಕೊಂಡೊಯ್ಯುತ್ತದೆ’ ಎಂದಿದ್ದಾರೆ.
‘ಈಗ ಈ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದರೆ ಆರ್ಟಿಕಲ್ 25,26, ಮತ್ತು 14ರ ಉಲ್ಲಂಘನೆಯಾಗುತ್ತದೆ. ಅದು ದೇಶದಲ್ಲಿ ಅಸ್ಥಿರತೆಗೆ ಕಾರಣವಾಗುತ್ತದೆ. ಇಡೀ ಮುಸ್ಲಿಂ ಸಮುದಾಯ ಯಾವುದೇ ವಕ್ಸ್ ಆಸ್ತಿಯನ್ನು ಬಿಟ್ಟುಕೊಡುವುದಿಲ್ಲ’ ಎಂದು ತಿಳಿಸಿದ್ದಾರೆ.
‘ನೀವು ವಿಕಸಿತ ಭಾರತ ಮಾಡಲು ಬಯಸುತ್ತೀರಿ. ಮಸೂದೆ ಮೂಲಕ ದೇಶವನ್ನು 80, 90ರ ದಶಕಕ್ಕೆ ಕೊಂಡೊಯ್ಯುತ್ತಿದ್ದೀರಿ, ಅದು ನಿಮ್ಮ ಜವಾಬ್ದಾರಿ. ಆದರೆ ಹೆಮ್ಮೆಯ ಭಾರತೀಯ ಮುಸಲ್ಮಾನನಾಗಿ ನನ್ನ ಮಸೀದಿಯ ಒಂದು ಇಂಚನ್ನು ಕಳೆದುಕೊಳ್ಳುವುದಿಲ್ಲ. ನನ್ನ ದರ್ಗಾದ ಒಂದು ಇಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ. ನಾವು ಇನ್ನು ಮುಂದೆ ಇಲ್ಲಿ ರಾಜತಾಂತ್ರಿಕ ಮಾತುಕತೆ ನಡೆಸುವುದಿಲ್ಲ. ಇದು ನಾನು ಪ್ರಾಮಾಣಿಕವಾಗಿ ನಿಂತು ಮಾತನಾಡಬೇಕಾದ ಸದನವಾಗಿದೆ, ನನ್ನ ಸಮುದಾಯವು ಹೆಮ್ಮೆಯ ಭಾರತೀಯರು. ಇದು ನನ್ನ ಆಸ್ತಿ, ಯಾರೂ ಕೊಟ್ಟಿದ್ದಲ್ಲ. ನೀವು ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ನುಡಿದಿದ್ದಾರೆ.