ನವದೆಹಲಿ : ಒಬ್ಬ ವ್ಯಕ್ತಿ ಗುರಿ ಸಾಧಿಸಲು ನಿರ್ಧರಿಸಿದರೆ ಕಠಿಣ ಪರಿಶ್ರಮ ಪಡಲೇಬೇಕು. ಪ್ರತಿ ವರ್ಷ ಅನೇಕ ಅಭ್ಯರ್ಥಿಗಳು UPSCಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅವರು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗುತ್ತಾರೆ. ಇಂದು ನಾವು ನಿಮಗೆ ಐಎಎಸ್ ಅಧಿಕಾರಿ ನಮಿತಾ ಶರ್ಮಾರ ಯಶಸ್ವಿ ಕಥೆಯನ್ನು ಹೇಳುತ್ತಿದ್ದೇವೆ. ಛಲಬಿಡದೆ ತಮ್ಮ ಗುರಿ ಸಾಧಿಸಿದ ಅವರ ಕಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ.
ನಮಿತಾ ಶರ್ಮಾರ ಯುಪಿಎಸ್ಸಿ ಪ್ರಯಾಣವು ತುಂಬಾ ಸವಾಲಿನದ್ದಾಗಿತ್ತು. ಇದರಲ್ಲಿ ಅವರು ಅನೇಕ ಬಾರಿ ವಿಫಲರಾಗಬೇಕಾಯಿತು. ನಾಗರೀಕ ಸೇವೆಯಲ್ಲಿ ನಮಿತಾ 5 ಬಾರಿ ಫೇಲ್ ಆಗಿದ್ದು ಗೊತ್ತಾದ್ರೆ ಆಶ್ಚರ್ಯ ಆಗುತ್ತೆ. ಎಷ್ಟೋ ಬಾರಿ ಫೇಲ್ ಆದ ನಂತರ ಹೆಚ್ಚಿನವರು ಭರವಸೆಯನ್ನೇ ಕಳೆದುಕೊಂಡುಬಿಡುತ್ತಾರೆ. ಆದರೆ, ನಮಿತಾ ಅವರು ಐಎಎಸ್ ಅಧಿಕಾರಿಯಾಗಲೇಬೇಕೆಂದು ನಿರ್ಧರಿಸಿದ್ದರು. ಈ ಉತ್ಸಾಹವೇ ಅವರಿಗೆ ದೊಡ್ಡ ಶಕ್ತಿ ನೀಡಿತ್ತು ಮತ್ತು ನಿರಂತರವಾಗಿ ಶ್ರಮಿಸಲು ಪ್ರೇರಣೆಯಾಯಿತು. 7 ವರ್ಷಗಳ ನಂತರ ಅವರು ಕಠಿಣ ಪರಿಶ್ರಮದ ಫಲ ಪಡೆದರು. ಯಶಸ್ಸು ಸಾಧಿಸುವ ಮೂಲಕ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾದರು. ಈ ಹೋರಾಟದ ಪಯಣದಲ್ಲಿ ಅವರು ತಾಳ್ಮೆಯನ್ನೇ ದೊಡ್ಡ ಅಸ್ತ್ರವನ್ನಾಗಿಸಿಕೊಂಡಿದ್ದರು. ಭಾರತದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಲಕ್ಷಾಂತರ ಅಭ್ಯರ್ಥಿಗಳ ಕನಸಾಗಿರುತ್ತದೆ. ಇಂತಹ ಅಭ್ಯರ್ಥಿಗಳಿಗೆ ನಮಿತಾ ಶರ್ಮಾ ಯಶಸ್ಸಿನ ಸೂತ್ರವನ್ನು ತಿಳಿಸಿದ್ದಾರೆ.
ಎಲ್ಲಕ್ಕಿಂತ ಮೊದಲು ನೀವು ಉತ್ತಮ ತಂತ್ರಗಾರಿಕೆಯೊಂದಿಗೆ ತಯಾರಿ ಮಾಡಿಕೊಳ್ಳಬೇಕು ಎಂದು ನಮಿತಾ ಹೇಳುತ್ತಾರೆ. ಸಮಯ ನಿರ್ವಹಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ವೇಳಾಪಟ್ಟಿಯ ಪ್ರಕಾರ ನಿಮ್ಮ ತಂತ್ರವನ್ನು ಕಾರ್ಯಗತಗೊಳಿಸಿ. ಕೆಲವೊಮ್ಮೆ ಇಲ್ಲಿ ನೀವು ಅನೇಕ ವರ್ಷಗಳವರೆಗೆ ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ. ಆದರೆ ಭಯಪಡುವ ಅಗತ್ಯವಿಲ್ಲ. ಪ್ರತಿ ಬಾರಿಯೂ ದುಪ್ಪಟ್ಟು ಉತ್ಸಾಹದಿಂದ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾಗಬೇಕು. ಕೊನೆ ಯತ್ನದವರೆಗೂ ಭರವಸೆ ಬಿಟ್ಟುಕೊಡದೆ ನಿಮ್ಮೆಲ್ಲ ಶ್ರಮದಿಂದ ಪ್ರಯತ್ನ ಮಾಡುತ್ತಿರಬೇಕು. ಪಾಸಿಟಿವ್ ಮನೋಭಾವ ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಮಾಡಬಹುದು. ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.