ನವದೆಹಲಿ: ಸೋನಮ್ ವಾಂಗ್ಚುಕ್ ಅವರೂ ವಿಡಿಯೋ ಸಂದೇಶದ ಮೂಲಕ ವಿಮರ್ಶಕರಿಗೆ ಖಾರವಾಗಿ ಉತ್ತರಿಸಿದ್ದಾರೆ. "ವಿದ್ಯಾರ್ಥಿಗಳಿಗಾಗಿ 26 ದಿನ ಉಪವಾಸ ಮಾಡಿ, 11 ಕೆಜಿ ತೂಕ ಕಳೆದುಕೊಂಡು, ದೆಹಲಿಯ ಭೀಕರ ಬಿಸಿಲಿನಲ್ಲಿ ಅಂಗಾಂಗಗಳು ನಿಷ್ಕ್ರಿಯಗೊಳ್ಳುವ ಹಂತಕ್ಕೆ ತಲುಪಿದ ಮೇಲೆಯೂ ನಾನು ಯಾರಿಂದಲಾದರೂ ಚಾರಿತ್ರ್ಯ ಪ್ರಮಾಣಪತ್ರ ಪಡೆಯಬೇಕೇ? ನಾನು ಯಾರೊಂದಿಗೆ ಉಪವಾಸ ಮುಗಿಸಿದೆ, ಡೀಲ್ ಮಾಡಿಕೊಂಡಿದ್ದೇನೆಯೇ ಎಂದು ಪ್ರಶ್ನಿಸುವ ಇಂತಹ ವಿಷಕಾರಿ ಆಲೋಚನೆಗಳನ್ನು ಹೊಂದಿರುವ ಜನರಿಗಾಗಿ ನಾಚಿಕೆಯಾಗುತ್ತದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ರಾಜಕೀಯ ದ್ವೇಷವಿಲ್ಲದ ತಟಸ್ಥ ವ್ಯಕ್ತಿಗಳ ಮಾತುಗಳನ್ನು ಮಾತ್ರ ಆಲಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನೀಟ್ (NEET) ಪರೀಕ್ಷಾ ಅಕ್ರಮ ಮತ್ತು ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿ ನಡೆಸುತ್ತಿದ್ದ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಶುಕ್ರವಾರ ಅಂತ್ಯಗೊಳಿಸಿದ್ದಾರೆ. ಪರೀಕ್ಷಾ ಸುಧಾರಣೆ ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ಲಭಿಸಿದ ಹಿನ್ನೆಲೆಯಲ್ಲಿ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಮೇದಾಂತ ಆಸ್ಪತ್ರೆಯಲ್ಲಿ ಅವರು ಉಪವಾಸ ಮುಗಿಸಿದರು.
ಇದೇ ವೇಳೆ, ಸೋನಮ್ ವಾಂಗ್ಚುಕ್ ಅವರ ನಿರಶನ ವಾಪಸ್ ಪಡೆದ ನಿರ್ಧಾರವನ್ನು ಟೀಕಿಸುತ್ತಿರುವ ವಿಮರ್ಶಕರಿಗೆ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ತೀವ್ರ ತಿರುಗೇಟು ನೀಡಿದ್ದಾರೆ. ತಮ್ಮ ರಾಜಕೀಯ ತೀರ್ಪುಗಳನ್ನು ಸ್ವಲ್ಪ ಸಮಯ ಬದಿಗೊತ್ತುವಂತೆ ಮನವಿ ಮಾಡಿರುವ ಅವರು, "ಸೋನಮ್ ವಾಂಗ್ಚುಕ್ ಅವರನ್ನು ವಿಮರ್ಶಿಸಲು ಧಾವಿಸುವ ಮೊದಲು, ತಮಗಿಂತ ದೊಡ್ಡದಾದ ಉದ್ದೇಶಕ್ಕಾಗಿ 26 ದಿನಗಳ ಕಾಲ ಉಪವಾಸ ಮಾಡುವ ತಪಸ್ಸನ್ನು ಅರ್ಥಮಾಡಿಕೊಳ್ಳಿ. ಅವರು ಇಂದು ಐಸಿಯುನಲ್ಲಿದ್ದಾರೆ. ಸ್ವಂತ ಅನುಕೂಲಕ್ಕಿಂತ ತ್ಯಾಗವನ್ನು ಆಯ್ಕೆ ಮಾಡಿಕೊಂಡ ಕಾರಣ ಅವರು 11 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರ ಮೇಲೆ ನಿಮ್ಮ ನಿರೀಕ್ಷೆ ಮತ್ತು ರಾಜಕೀಯ ಲೆಕ್ಕಾಚಾರಗಳನ್ನು ಹೇರುವ ಮೊದಲು ಕನಿಷ್ಠ ಒಂದು ದಿನ ಮಾನವೀಯತೆ ತೋರಿಸಿ. ನಿಸ್ವಾರ್ಥ ಸೇವೆಯ ಜೀವನವನ್ನು ನಿರ್ಣಯಿಸಲು ಎಲ್ಲರಿಗೂ ಅರ್ಹತೆಯಿರುವುದಿಲ್ಲ," ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.