ಹೊಸದಿಲ್ಲಿ: ಕಾಶ್ಮೀರದ ಪೆಹಲ್ಗಾಮ್ನಲ್ಲಿ ಏ. 22ರಂದು ನಡೆದ ಉಗ್ರರ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದಲ್ಲಿದ್ದ ಭಯೋತ್ಪಾದರ ಅಡುಗು ತಾಣಗಳನ್ನು ಧ್ವಂಸ ಮಾಡಿದ್ದು, ಈಗಾಗಲೇ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಭಾರತ ಆಪರೇಷನ್ ಸಿಂದೂರ್ (Operation Sindoor) ಕಾರ್ಯಚರಣೆ ಯಶಸ್ವಿಯಾಗಿದೆ. ಜತೆಗೆ ಮೇ 10ರಂದು ಭಾರತ-ಪಾಕಿಸ್ತಾನ ಮಧ್ಯೆ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿದೆ. ಸೋಮವಾರ (ಮೇ 12)ರ ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಈ ಬಗ್ಗೆ ವಿಸ್ತೃತ ಮಾತುಕತೆ ನಡೆಸಲಿದ್ದಾರೆ. ಅದಕ್ಕೂ ಮುನ್ನವಾಗಿ ಭಾರತೀಯ ಸೇನೆಯ ಮೂರು ಪಡೆ (ವಾಯುಸೇನೆ, ನೌಕ ಪಡೆ ಹಾಗೂ ಭೂಸೇನೆ)ಯ ಮುಖ್ಯಸ್ಥರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಶೇಷ ಪತ್ರಿಕಾಗೋಷ್ಠಿಯನ್ನು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ (ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು), ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ (ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರು) ಮತ್ತು ಏರ್ ಮಾರ್ಷಲ್ ಎ.ಕೆ.ಭಾರ್ತಿ (ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರು) ಭಾಗವಹಿಸಿದ್ದಾರೆ. ಪಾಕಿಸ್ತಾನದ ಯಾವುದೇ ಯುದ್ಧ ವಿಮಾನವನ್ನು ದೇಶದೊಳಗೆ ನುಸುಳಲು ಬಿಟ್ಟಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.
ಏರ್ ಮಾರ್ಷಲ್ ಎ.ಕೆ.ಭಾರ್ತಿ ಮಾತನಾಡಿ, ʼʼಭಾರತದ ಹೋರಾಟ ಭಯೋತ್ಪಾದಕರು, ಅವರ ಬೆಂಬಲಿಗರು, ಮೂಲಸೌಕರ್ಯಗಳ ವಿರುದ್ಧವಾಗಿದೆಯೇ ಹೊರತು ಪಾಕಿಸ್ತಾನ ಸೇನೆಯೊಂದಿಗೆ ಅಲ್ಲ. ಆದಾಗ್ಯೂ ಪಾಕಿಸ್ತಾನ ಸೇನೆಯು ಮಧ್ಯಪ್ರವೇಶಿಸಿ ಭಯೋತ್ಪಾದಕರ ಪರವಾಗಿ ಹೋರಾಟ ನಡೆಸಿದೆ. ಇದರಿಂದಾಗಿ ನಾವು ಪ್ರತಿಕ್ರಿಯಿಸಬೇಕಾಯಿತುʼʼ ಎಂದು ತಿಳಿಸಿದರು. ಇದೇ ವೇಳೆ ಧ್ವಂಸಗೊಂಡ ಪಾಕಿಸ್ತಾನಿ ಮಿರಾಜ್ನ ಅವಶೇಷಗಳನ್ನು ಪ್ರದರ್ಶಿಸಲಾಯಿತು.
ʼʼನಾವು ಪಾಕ್ ಮಿಲಿಟರಿ ಆಕ್ರಮಣಗಳನ್ನು ವಿಫಲಗೊಳಿಸಿದ್ದೇವೆ. ಭಾರತದ ಬಲಿಷ್ಠ ವಾಯು ರಕ್ಷಣಾ (AD) ವ್ಯವಸ್ಥೆಯು ವಿವಿಧ ಹಂತಗಳಲ್ಲಿನ ವೈಮಾನಿಕ ಬೆದರಿಕೆಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಸ್ಥಳೀಯ ವಾಯು ರಕ್ಷಣಾ ವ್ಯವಸ್ಥೆಯಾದ ಆಕಾಶ್ ಅದ್ಭುತ ಕಾರ್ಯ ಕ್ಷಮತೆ ಪ್ರದರ್ಶಿಸಿದೆʼʼ ಎಂದು ಎ.ಕೆ.ಭಾರ್ತಿ ಹೇಳಿದರು.