ನವದೆಹಲಿ: ದಕ್ಷಿಣ ಕಾಶ್ಮೀರದ (Kashmir) ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಕಳೆದ ಏ. 22ರಂದು ನಡೆದ ಭಯೋತ್ಪಾದಕ ದಾಳಿಯ (Pahalgam attack) ಬಳಿಕ ಲಷ್ಕರ್ (Lashkar), ಜೈಶ್ (Jaish), ಹಿಜ್ಬುಲ್ (Hizbul) ಸಂಘಟನೆಗೆ ಸೇರಿದ ಕೆಲವು ಭಯೋತ್ಪಾದಕರ ಹೆಸರು ‘ಮೋಸ್ಟ್ ವಾಂಟೆಡ್’ ಪಟ್ಟಿಗೆ (Most Wanted Terrorists) ಸೇರ್ಪಡೆ ಮಾಡಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಗುರುತಿಸಲಾದ ಭಯೋತ್ಪಾದಕರಲ್ಲಿ ಎಂಟು ಮಂದಿ ಲಷ್ಕರ್-ಎ-ತೈಬಾದೊಂದಿಗೆ ಸಂಬಂಧ ಹೊಂದಿದ್ದರೆ, ತಲಾ ಮೂವರು ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದವರು ಎನ್ನುವುದು ಗುಪ್ತಚರ ಸಂಸ್ಥೆಗಳು ನಡೆಸಿದ ತನಿಖೆ ವೇಳೆ ಬಹಿರಂಗವಾಗಿದೆ.
ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯ ಬಳಿಕ ಗುಪ್ತಚರ ಸಂಸ್ಥೆಗಳು ದಾಳಿಗೆ ಸಂಚು ರೂಪಿಸಿರುವ ಸ್ಥಳೀಯ ಭಯೋತ್ಪಾದಕರ ಹುಡುಕಾಟವನ್ನು ತೀವ್ರಗೊಳಿಸಿವೆ. ದಕ್ಷಿಣ ಕಾಶ್ಮೀರದ ಅನಂತನಾಗ್, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಸಕ್ರಿಯ ಭಯೋತ್ಪಾದಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇವರಿಗಾಗಿ ಕಣಿವೆಯಾದ್ಯಂತ ಶೋಧ ಕಾರ್ಯವನ್ನು ಚುರುಕುಗೊಳಿಸಿವೆ.
ಈ ಪಟ್ಟಿಯಲ್ಲಿ ಗುರುತಿಸಲಾಗಿರುವ ಎಂಟು ಮಂದಿ ಲಷ್ಕರ್-ಎ-ತೈಬಾದೊಂದಿಗೆ ಸಂಬಂಧ ಹೊಂದಿದ್ದರೆ, ತಲಾ ಮೂವರು ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದ್ದಾರೆ. ಇದರಲ್ಲಿರುವ ಒಬ್ಬ ಲಷ್ಕರ್ ಭಯೋತ್ಪಾದಕ ಎಹ್ಸಾನ್ ಉಲ್ ಹಕ್ ವಿರುದ್ಧ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಪುಲ್ವಾಮಾದಲ್ಲಿರುವ ಆತನ ಮನೆಯನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.
ಈ ಪಟ್ಟಿಯಲ್ಲಿ ಇನ್ನು ಕೆಲವರ ಹೆಸರಿದ್ದು, ಇದರಲ್ಲಿ ಆದಿಲ್ ರೆಹಮಾನ್ ದೇತು ಎಂಬಾತ 2021ರಲ್ಲಿ ಭಯೋತ್ಪಾದನ ಚಟುವಟಿಕೆಗೆ ಸೇರಿಕೊಂಡನು. ಈತ ಸೋಪೋರ್ನ ಲಷ್ಕರ್ ಕಮಾಂಡರ್. ಅವಂತಿಪೋರಾದ ಜೈಶ್ ಕಮಾಂಡರ್ ಅಹ್ಮದ್ ಶೇಖ್ 2022ರಿಂದ ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿದ್ದಾನೆ.
ಹರೀಸ್ ನಜೀರ್ ಪುಲ್ವಾಮಾದ ದಾಳಿಯಲ್ಲಿ ಭಾರತೀಯ ಸೇನೆ ಹುಡುಕುತ್ತಿರುವ ಲಷ್ಕರ್ ಭಯೋತ್ಪಾದಕ, ಅಮೀರ್ ನಜೀರ್ ವಾನಿ, ಯಾವರ್ ಅಹ್ಮದ್ ಭಟ್ ಪುಲ್ವಾಮಾದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ, ಆಸಿಫ್ ಅಹ್ಮದ್ ಕಾಂಡೆ 2015ರಿಂದ ಹಿಜ್ಬುಲ್ ಮುಜಾಹಿದ್ದೀನ್ ಜತೆ ಸಂಬಂಧ ಹೊಂದಿದ್ದಾನೆ. ಈತ ಕಾಶ್ಮೀರದಲ್ಲಿ ಲಷ್ಕರ್ ಮತ್ತು ಜೈಶ್ ಕಾರ್ಯಕರ್ತರಿಗೆ ಸಹಾಯ ಮಾಡುತ್ತಿದ್ದಾನೆ ಎಂದು ಶಂಕಿಸಲಾಗಿದೆ. ಶೋಪಿಯಾನ್ನ ಲಷ್ಕರ್ ಭಯೋತ್ಪಾದಕ ನಾಸಿರ್ ಅಹ್ಮದ್ ವಾನಿ ಕೂಡ ಈ ಪಟ್ಟಿಯಲ್ಲಿದ್ದಾನೆ.
ಶೋಪಿಯಾನ್ನ ಇನ್ನೋರ್ವ ಲಷ್ಕರ್ ಭಯೋತ್ಪಾದಕ ಶಾಹಿದ್ ಅಹ್ಮದ್ ಕುಟಯ್ಯ ಪಹಲ್ಗಾಮ್ ಭಯೋತ್ಪಾದನೆಯ ಹೊಣೆ ಹೊತ್ತುಕೊಂಡಿರುವ ಟಿಆರ್ಎಫ್ ಅನ್ನು ಮುನ್ನಡೆಸುತ್ತಿದ್ದಾನೆ. ಆಮೀರ್ ಅಹ್ಮದ್ ದಾರ್ 2023ರಿಂದ ಟಿಆರ್ಎಫ್ನಲ್ಲಿ ಸಕ್ರಿಯನಾಗಿದ್ದಾನೆ.
ಅದ್ನಾನ್ ಸಫಿ ದಾರ್ 2024ರಲ್ಲಿ ಟಿಆರ್ಎಫ್ಗೆ ಸೇರಿದ್ದು, ಅಂದಿನಿಂದ ಭಯೋತ್ಪಾದಕ ಪಿತೂರಿಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅನಂತ್ನಾಗ್ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ನ ಮುಖ್ಯ ಕಾರ್ಯಾಚರಣೆ ಕಮಾಂಡರ್, ಎ+ ವರ್ಗದ ಭಯೋತ್ಪಾದಕ ಎಂದು ಗುರುತಿಸಲಾಗಿರುವ ಜುಬೇರ್ ಅಹ್ಮದ್ ವಾನಿ 2018ರಿಂದ ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಅನಂತ್ನಾಗ್ನ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಹರುನ್ ರಶೀದ್ ಗನಿ ತರಬೇತಿಗಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಬಂದಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ.
ಕುಲ್ಗಾಮ್ನ ಜುಬೇರ್ ಅಹ್ಮದ್ ಗನಿ ಟಿಆರ್ಎಫ್ನೊಂದಿಗೆ ಸಂಬಂಧ ಹೊಂದಿದ್ದು, ಭದ್ರತಾ ಪಡೆಗಳ ಮೇಲಿನ ಹಲವಾರು ದಾಳಿ ಪ್ರಕರಣಗಳಲ್ಲಿ ಭಾರತೀಯ ಪಡೆಗೆ
ಬೇಕಾದವನಾಗಿದ್ದಾನೆ.ಇವರಿಷ್ಟೇ ಅಲ್ಲ ಟ್ರಾಲ್ನ ಆಸಿಫ್ ಶೇಖ್, ಬಿಜ್ಬೆಹರಾದ ಆದಿಲ್ ಗುರಿ, ಶೋಪಿಯಾನ್ನ ಶಬೀರ್ ಅಹ್ಮದ್ ಕುಟ್ಟಾಯ್ ಮತ್ತು ಕುಲ್ಗಾಮ್ನ ಜಾಕಿರ್ ಗನಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಗುಪ್ತಚರ ದಾಖಲೆಗಳ ಪ್ರಕಾರ ಪಹಲ್ಗಾಮ್ ದಾಳಿ ನಡೆಯುವ ಕೆಲವೇ ದಿನಗಳ ಮೊದಲು ಇವರೆಲ್ಲ ಕಣಿವೆಯಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.