ನವದೆಹಲಿ : ಭಯೋತ್ಪಾದಕ ಗುಂಪುಗಳನ್ನು ಅಫ್ಘಾನಿಸ್ತಾನ ನಿರ್ನಾಮ ಮಾಡಿದೆ. ಪಾಕಿಸ್ತಾನ ಕೂಡ ಅದೇ ಶಾಂತಿಯ ಮಾರ್ಗವನ್ನು ಅನುಸರಿಸಬೇಕು ಎಂದು ಭಾರತದ ನೆಲದಿಂದ ಪಾಕ್ಗೆ ತಾಲಿಬಾನ್ ಸಚಿವ ಸಲಹೆ ನೀಡಿದ್ದಾರೆ.
ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಶುಕ್ರವಾರ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ “ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ನಂತಹ ಭಯೋತ್ಪಾದಕ ಗುಂಪುಗಳು ಅಫ್ಘಾನ್ ನೆಲದಿಂದ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿವೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ತಾಲಿಬಾನ್ ಎಲ್ಲಾ ಭಯೋತ್ಪಾದಕರನ್ನು ನಿರ್ನಾಮ ಮಾಡಿದೆ” ಎಂದು ತಿಳಿಸಿದ್ದಾರೆ.
“ಭಯೋತ್ಪಾದಕರಲ್ಲಿ ಒಬ್ಬರೂ ಅಫ್ಘಾನಿಸ್ತಾನದಲ್ಲಿಲ್ಲ. ಅಫ್ಘಾನಿಸ್ತಾನದಲ್ಲಿ ಒಂದು ಇಂಚು ಭೂಮಿಯೂ ಅವರ ನಿಯಂತ್ರಣದಲ್ಲಿಲ್ಲ. ನಾವು (2021 ರಲ್ಲಿ) ಕಾರ್ಯಾಚರಣೆ ನಡೆಸಿದ ಅಫ್ಘಾನಿಸ್ತಾನವು ಬದಲಾಗಿದೆ. ಶಾಂತಿಗಾಗಿ ಅಫ್ಘಾನಿಸ್ತಾನ ಮಾಡಿದಂತೆ ಇತರ ದೇಶಗಳು ಸಹ ಅಂತಹ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲಿ” ಎಂದು ಹೇಳಿದ್ದಾರೆ.
ಭಾರತಕ್ಕೆ ಮುತ್ತಕಿ ಅವರ ಭೇಟಿಯು ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳನ್ನು ಪುನಸ್ಥಾಪಿಸಲು ಸಹಕಾರಿಯಾಗಿದೆ. ಭಾರತವು ಕಾಬೂಲ್ನಲ್ಲಿರುವ ತನ್ನ ತಾಂತ್ರಿಕ ಮಿಷನ್ ಅನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಿದೆ ಎಂದು ಮುತ್ತಕಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಜೈಶಂಕರ್ ತಿಳಿಸಿದ್ದಾರೆ.