ಚಿತ್ರದುರ್ಗ : ಒಂದು ನಾಡಿನ ನಿಜವಾದ ಸಂಪತ್ತು ಎಂದರೆ ಪರರ ಧರ್ಮ ಹಾಗೂ ಪರರ ವಿಚಾರವನ್ನು ಸಹನೆಯಿಂದ ಕಾಣುವುದು ಎಂದು 9ನೇ ಶತಮಾನದ ಕನ್ನಡದ ಲಾಕ್ಷಣಿಕ ಗ್ರಂಥ ಕವಿರಾಜ ಮಾರ್ಗದಲ್ಲಿ ಹೇಳಲಾಗಿದೆ. ಪರಧರ್ಮ ಸಹಿಷ್ಣುತೆಯೇ ಕನ್ನಡ ನಾಡಿನ ನಿಜ ಅಂತಃಸತ್ವ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರತಿಪಾದಿಸಿದರು.
ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡಿದರು.
ಕನ್ನಡ ನಾಡು ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಹಲವು ಧರ್ಮಗಳಿದ್ದರೂ ಸಾಮರಸ್ಯದಿಂದ ಎಲ್ಲರೂ ಬದುಕುತಿದ್ದೇವೆ. ಇದು ಕನ್ನಡಿಗರ ಔದಾರ್ಯ, ಮಾನವೀಯತೆಯನ್ನು ಜಗತ್ತಿಗೆ ಎತ್ತಿ ತೋರಿಸಿದೆ. ಕನ್ನಡ ನಾಡಿನ ಬಹುತೇಕ ಸಾಹಿತಿಗಳು ತಮ್ಮ ಕಾವ್ಯದಲ್ಲಿ ಇದನ್ನು ಚಿತ್ರಿಸಿದ್ದಾರೆ ಎಂದರು.
ಆಧುನಿಕ ಮಾಕ್ರ್ಸ್ವಾದ, ಸ್ತ್ರೀವಾದ, ಅಸ್ತಿತ್ವವಾದ, ಕಾಯಕದ ಸಮಾನತೆ, ಇಂತಹ ಹಲವು ತಾತ್ವಿಕ ಸಿದ್ಧಾಂತಗಳನ್ನು ಎಂಟುನೂರು ವರ್ಷಗಳ ಮೊದಲೇ ಕನ್ನಡಿಗ ವಚನಕಾರರ ತಾತ್ವ್ವಿಕ ವಿಚಾರಗಳಾಗಿವೆ. ಕುಮಾರವ್ಯಾಸರು, ಕನಕದಾಸರು, ಪುರಂದರದಾಸರು, ಅವರ ವಿಚಾರಗಳು ಸಮಾಜ ಸುಧಾರಣೆಯ ಚಿಂತನೆಗಳಾಗಿವೆ. ಆಧುನಿಕ ಕವಿಗಳಾದ ಕುವೆಂಪು, ಮಾಸ್ತಿ, ಬೇಂದ್ರೆ, ಗೋಕಾಕ್, ಕಾರ್ನಾಡ್, ಕಂಬಾರ ಮುಂತಾದವರು ಕನ್ನಡದ ಭಾಷಾ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ನಾಡನ್ನಾಳಿದ ಎಲ್ಲಾ ರಾಜರು ಕವಿಗಳಿಗೆ ಆಶ್ರಯ ನೀಡಿ ಕನ್ನಡವನ್ನು ಬೆಳಸಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಸ್ವಾತಂತ್ರ್ಯ ಪೂರ್ವದಿಂದಲೇ ಭಾಷವಾರು ಪ್ರಾಂತ್ಯ ರಚನೆಗಾಗಿ ಹೋರಾಟ ಆರಂಭವಾಗಿತ್ತು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗಗಳು ಪುನ: ಒಂದಾಗಿ ಸಾಂಸ್ಕøತಿಕ ಏಕತೆ ಹಾಗೂ ರಾಜಕೀಯ ಏಕತೆಯನ್ನು ಸಾಧಿಸಬೇಕು ಎಂಬ ಸದಾಶಯದಿಂದ ಏಕೀಕರಣ ಚಳುವಳಿ ಹುಟ್ಟಿಕೊಂಡಿತು. ಡೆಪ್ಯೂಟಿ ಚನ್ನಬಸಪ್ಪ, ಆಲೂರು ವೆಂಕಟರಾಯರು, ಬಿ.ಎಂ.ಶ್ರೀಕಂಠಯ್ಯ, ಕುವೆಂಪು, ಯು.ರಾಮರಾವ್, ಬೆನಗಲ್ ಶಿವರಾಂ, ಬೆನಗಲ್ರಾಮರಾವ್, ಮದವೀಡು ಕೃಷ್ಣರಾವ್, ಕಡಪ ರಾಘವೇಂದ್ರರಾವ್, ದೇಶ್ಪಾಂಡೆ, ಗಂಗಾಧರರಾವ್, ಗದಿಗೆಯ್ಯ, ಹೊನ್ನ ಪುರಮಠ್, ಹರ್ಡೇಕರ್ ಮಂಜಪ್ಪ, ಹುಯಿಲಗೋಳ ನಾರಾಯಣರಾವ್, ಕಾರ್ನಾಡ್ ಸದಾಶಿವರಾವ್, ಶ್ರೀನಿವಾಸ ಮಲ್ಯ, ಕೆ.ಆರ್.ಕಾರಂತ್, ಆರ್.ಆರ್.ದಿವಾಕರ್, ಡಾ.ನಾಗನಗೋಡ, ಅಂದಾನಪ್ಪ ದೊಡ್ಡಮೇಟಿ, ಜಿನರಾಜ್ ಹೆಗಡೆ, ಚಿತ್ರದುರ್ಗದ ರಾಷ್ಟ್ರನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ, ಹುಲ್ಲೂರು ಶ್ರೀನಿವಾಸ ಜೋಯಿಸ್ ಮೊದಲಾದವರು ಏಕೀಕರಣಕ್ಕಾಗಿ ಶ್ರಮಿಸಿದರು. ಇವರ ಹೋರಾಟಗಳ ಫಲವಾಗಿ ಇಂದು ನಾವು ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಸಚಿವ ಡಿ.ಸುಧಾಕರ್ ಸ್ಮರಿಸಿದರು.
ಇಂಗ್ಲೀಷ್ ಭಾಷೆಗಿಂತ ಒಂದೂವರೆ ಸಾವಿರ ವರ್ಷದಷ್ಟು ಪ್ರಾಚೀನ ಭಾಷೆ ಕನ್ನಡ. ಕ್ರಿಸ್ತ ಹುಟ್ಟುವ ಮುನ್ನವೇ ಕನ್ನಡ ಆಡು ಭಾಷೆಯಾಗಿತ್ತು. ಉಪನಿಷತ್ತು, ಮಹಾಭಾರತ ಮತ್ತು ತಮಿಳು ಕಾವ್ಯಗಳಲ್ಲಿ ಕನ್ನಡಿಗರ ಉಲ್ಲೇಖವಿದೆ. ಕ್ರಿ.ಶ. 450ರ ಕನ್ನಡದ ಮೊದಲ ಶಾಸನ-ಹಲ್ಮಿಡಿ ಶಾಸನದಿಂದ ನಮ್ಮ ಭಾಷೆ ಬರಹರೂಪಕ್ಕೆ ಬಂದು ಸಾಹಿತ್ಯ ರೂಪ ಪಡೆದು ಗ್ರಂಥಸ್ಥ ಸ್ವರೂಪಕ್ಕೆ ಬಂದಿತು ಎಂದರೆ ಆಶ್ಚರ್ಯವಾಗುತ್ತದೆ. ಸರ್ಕಾರ ಇತ್ತೀಚೆಗೆ ಈ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲ್ಮಿಡಿ ಶಾಸನದ ಪ್ರತಿರೂಪವನ್ನು ಎಲ್ಲರೂ ನೋಡಲೆಂದು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಷ್ಠಾಪಿಸಿದೆ. ಕನ್ನಡವನ್ನು ಉಳಿಸಿ-ಬೆಳೆಸುವ ಪ್ರತಿಯೊಬ್ಬ ಕನ್ನಡಿಗನು ಆತ್ಮ ಸಮರ್ಪಿತವಾಗಿ ಪ್ರಯತ್ನ ಪಡಬೇಕು ಎಂದು ಸಚಿವ ಡಿ.ಸುಧಾಕರ್ ಕರೆ ನೀಡಿದರು.
ಗುಣಮಧುರ ಎಂಬ ರಾಜನ ಗುಣಗಾನ ಮಾಡುವ ಮೊದಲ ಕನ್ನಡ ಪದ್ಯ ತಮಟಕಲ್ಲಿನ ಮೊದಲ ಶಾಸನದಲ್ಲಿದೆ. ಗಂಡುಗಲಿ ಮದಕರಿನಾಯಕ, ವೀರ ವನಿತೆ ಓಬವ್ವ ಕನ್ನಡಿಗರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಸರ್ಕಾರ ನಾನಾ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾವಲು ಸಮಿತಿ ನೇಮಿಸಿ ಆಡಳಿತ ಭಾಷೆಯಾಗಿ ಕನ್ನಡ ಕಡ್ಡಾಯ ಮಾಡಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ. ಕನ್ನಡ ಭಾಷೆ ಬಾರದಿರುವ ಉದ್ಯೋಗಿಗಳಿಗೆ ಕನ್ನಡ ಕಲಿಸಲು “ಕನ್ನಡ ಕಲಿಕಾ ಘಟಕ’’ ವನ್ನು ಸ್ಥಾಪಿಸಿ ಸರ್ಕಾರವು ಅಗತ್ಯ ಬೋಧಕ ಸಿಬ್ಬಂದಿ ಮತ್ತು ಕಲಿಕಾ ಸಾಮಗ್ರಿಯನ್ನು ಒದಗಿಸಿ ಹಾಗೆಯೇ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.
2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಜಿಲ್ಲೆಯ ಹನುಮಂತಪ್ಪ ಮಾರಪ್ಪ ಚೀಳಂಗಿ ಅವರಿಗೆ ಸಚಿವ ಡಿ.ಸುಧಾಕರ್ ಸಂದೇಶ ಭಾಷಣದಲ್ಲಿ ಅಭಿನಂದಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
***********ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 26 ಮಂದಿ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಏರ್ಪಡಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದ ಗಣತಿದಾರರನ್ನೂ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ:
**********ಚಿತ್ರದುರ್ಗ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ವೆಸ್ಟರ್ನ್ ಹಿಲ್ಸ್ ಹಾಗೂ ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಸಂಸ್ಕøತಿ ಹಾಗೂ ಮಹತ್ವ ಸಾರುವಂತಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮಹಬೂಬ್ ಪಾಷ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
































