ಹೊಳಲ್ಕೆರೆ : ಅಧಿಕಾರ ಶಾಶ್ವತವಲ್ಲ. ಸಾರ್ವಜನಿಕರ ಜೀವನವನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಬಡವರ ಕಣ್ಣೀರೊರೆಸುವ ಕೆಲಸ ಮಾಡಬೇಕೆಂಬ ಕಾಳಜಿಯಿಟ್ಟುಕೊಂಡಿರುವ ರಾಜಕಾರಣಿ ನಾನು ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ಅಮೃತಾಪುರ ಗ್ರಾಮದಲ್ಲಿ ಮೂರು ಕೋಟಿ 75 ಲಕ್ಷ ರೂ.ವೆಚ್ಚದಲ್ಲಿ ನೂತನ ಬಡಾವಣೆ, ಪ್ರಾಥಮಿಕ ಆರೋಗ್ಯ ಕೇಂದ, ಮತ್ತು ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
60 ಲಕ್ಷ ರೂ.ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. ಹದಿನೈದು ಲಕ್ಷ ರು.ಗಳಲ್ಲಿ ಅಂಗನವಾಡಿ ಶಾಲೆ ಕಟ್ಟಿಸಲಾಗಿದೆ. ಸೈಟ್ಗಳ ನಿರ್ಮಾಣಕ್ಕೆ ಎರಡು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. 259 ಮನೆಗಳನ್ನು ನಿರ್ಮಿಸಲಾಗುವುದೆಂದು ಹೇಳಿದರು.
ಕಾಶಿಪುರದಲ್ಲಿ ಎಲ್.ಕೆ.ಜಿ.ಯಿಂದ ಹಿಡಿದು ಪಿ.ಯು.ಸಿ.ವರೆಗೆ ಬಡ ಮಕ್ಕಳ ಶಿಕ್ಷಣಕ್ಕೆ ಶಾಲಾ-ಕಾಲೇಜುಗಳನ್ನು ಕಟ್ಟಿಸಲಾಗಿದೆ. ಸೈಟ್ ಇಲ್ಲದವರಿಗೆ ನಿವೇಶನಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸ್ವಂತ ಖರ್ಚಿನಿಂದ ಬಸ್ಗಳನ್ನು ಬಿಟ್ಟಿದ್ದೇನೆ. ಡ್ರೈವರ್, ಕಂಡಕ್ಟರ್ಗೆ ಕೈಯಿಂದ ಸಂಬಳ ನೀಡಿ ಬಸ್ಗೆ ಡೀಸೆಲ್ ಕೂಡ ಹಾಕಿಸಲಾಗುವುದು. ರಾಜ್ಯದಲ್ಲಿ ಯಾವ ಶಾಸಕನು ಸರ್ಕಾರಿ ಶಾಲೆಯ ಮಕ್ಕಳಿಗೆ ಬಸ್ಗಳ ವ್ಯವಸ್ಥೆ ಕಲ್ಪಿಸಿಲ್ಲ. ಸರ್ಕಾರ ಮಕ್ಕಳನ್ನು ಶಿಕ್ಷಣವಂತರನ್ನಾಗಿಸುವ ಕಾರಣಕ್ಕಾಗಿ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ಗಳನ್ನು ನೀಡುತ್ತಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಶಿಕ್ಷಣವಂತರಾಗಿ ಗುರು-ಹಿರಿಯರು, ಪೋಷಕರುಗಳಿಗೆ ಕೀರ್ತಿ ತರುವಂತಾಗಬೇಕೆಂದು ಹಾರೈಸಿದರು.
ಪುರಸಭೆ ಸದಸ್ಯೆ ಸುಧಾ ಬಸವರಾಜ್, ಸಿದ್ದರಾಮಪ್ಪ, ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಂಜುನಾಥ್, ರಂಗಸ್ವಾಮಿ, ಡಾ.ರೇಖಾ, ಡಾ.ಮನು, ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.