ಬಿಹಾರ : ಕೆಲವೊಮ್ಮೆ ನಮ್ಮ ಕನಸಿಗಾಗಿ ಕೆಲವೊಂದನ್ನು ತ್ಯಾಗ ಮಾಡಬೇಕಾಗುತ್ತದೆ. ಹೀಗೆ ತನ್ನ ವೃತ್ತಿಯನ್ನು ತೊರೆದು ಐಎಎಸ್ ಅಧಿಕಾರಿಯಾಗುವ ತನ್ನ ಕನಸನ್ನು ನನಸಾಗಿಸಿಕೊಂಡ ಪ್ರಿಯಾ ರಾಣಿ ಅವರ ಯಶೋಗಾಥೆ ಇದು.
ಬಿಹಾರ ಮೂಲದ ಪ್ರಿಯಾ ರಾಣಿ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ರೈತ, ತಾಯಿ ಗೃಹಿಣಿ. ಆರ್ಥಿಕ ಸಂಕಷ್ಟಗಳ ಹೊರತಾಗಿಯೂ, ಪ್ರಿಯಾ ಅವರ ಪೋಷಕರು ಆಕೆಗೆ ಉತ್ತಮ ಶಿಕ್ಷಣವನ್ನು ನೀಡಿದರು. ಅವರ ಅಜ್ಜ ಉತ್ತಮ ಶಿಕ್ಷಣಕ್ಕಾಗಿ ಪ್ರಯಾ ಅವರನ್ನು ಪಾಟ್ನಾಗೆ ಕರೆದುಕೊಂಡು ಹೋದರು. ಆ ಸಮಯದಲ್ಲಿ ಗ್ರಾಮದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ವಿರೋಧವಿತ್ತು, ಆದರೆ ಅವರ ಅಜ್ಜನವರು ಮತ್ತು ತಂದೆ ಆಕೆಯ ಕೈಬಿಡಲಿಲ್ಲ. ಪ್ರಿಯಾ ಪಾಟ್ನಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಪ್ರಿಯಾ ರಾಂಚಿಯಲ್ಲಿ ಇಂಜಿನಿಯರಿಂಗ್ ಅಧ್ಯಯನ ಮುಂದುವರಿಸಿದರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ ನಂತರ, ಪ್ರಿಯಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆಂಬ ದೊಡ್ಡ ಕನಸಿತ್ತು. ಹೀಗಾಗಿ ತಮ್ಮ ಕೆಲಸವನ್ನು ತೊರೆಯಲು ನಿರ್ಧರಿಸಿದರು. ಅವರ ತಂದೆ ಅವರ ನಿರ್ಧಾರವನ್ನು ಬೆಂಬಲಿಸಿದರು.
ಪ್ರಿಯಾ ಅವರ ಐಎಎಸ್ ಅಧಿಕಾರಿಯಾಗುವ ಪ್ರಯಾಣ ಸುಲಭವಾಗಿರಲಿಲ್ಲ. ಪರೀಕ್ಷೆಗೆ ತಯಾರಿ ನಡೆಸಲು ಅವರು ಹಗಲು ರಾತ್ರಿ ಅಧ್ಯಯನ ಮಾಡಿದರು. ಅವರು ಅರ್ಥಶಾಸ್ತ್ರವನ್ನು ತಮ್ಮ ಮುಖ್ಯ ವಿಷಯವನ್ನಾಗಿ ತೆಗೆದುಕೊಂಡರು. ಯುಪಿಎಸ್ಸಿ ಅಧ್ಯಯನಕ್ಕಾಗಿ ಪ್ರಿಯಾ ದೆಹಲಿಗೆ ತೆರಳಿದರು.
2021 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 284 ನೇ ಅಖಿಲ ಭಾರತ ರ್ಯಾಂಕ್ ಗಳಿಸಿದರು. ಬಳಿಕ ಅವರನ್ನು ಭಾರತೀಯ ರಕ್ಷಣಾ ಎಸ್ಟೇಟ್ ಸೇವೆಗೆ (ಐಡಿಇಎಸ್) ಆಯ್ಕೆ ಮಾಡಲಾಯಿತು.
ನಂತರ ಪ್ರಿಯಾ ಅವರು 2022ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು 69 ನೇ ಅಖಿಲ ಭಾರತ ರ್ಯಾಂಕ್ ಪಡೆದು ಐಎಎಸ್ ಕೇಡರ್ಗೆ ಆಯ್ಕೆಯಾದರು. ಪ್ರಸ್ತುತ ಹಿಮಾಚಲ ಪ್ರದೇಶದ ಕಸೌಲಿ ಮತ್ತು ದಾಗ್ಶಾಯ್ ಕಂಟೋನ್ಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.