ಬೆಳಗಾವಿ: ಯತ್ನಾಳ್ ಉಚ್ಚಾಟನೆಯ ಯತ್ನ ಒಂದು ತಿಂಗಳಿಂದ ನಡೆದಿತ್ತು. ನಮಗೆ ಮೊದಲೇ ಸುದ್ದಿ ಇತ್ತು ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬಿಜೆಪಿಯಿದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯ ಬಗ್ಗೆ ಮಾತನಾಡಿದ ಅವರು, ಹೈಕಮಾಂಡ್ ಜೊತೆಗೆ ನಿನ್ನೆ ರಾತ್ರಿ ಮಾತನಾಡಿದ್ದೇನೆ. ಪಕ್ಷಕ್ಕೆ ಯತ್ನಾಳ್ ನ್ಯಾಯುತವಾಗಿ ದುಡಿದಿದ್ದಾರೆ. ಇದು ವಿರೋಧಿ ಬಣಕ್ಕೂ ಎಚ್ಚರಿಕೆ ಗಂಟೆಯಾಗಿದ್ದು ಯತ್ನಾಳ್ ಮತ್ತೆ ಬಿಜೆಪಿಗೆ ವಾಪಸ್ ಬರುತ್ತಾರೆ ಎಂದರು.
ಯತ್ನಾಳ್ ಅವರು ಪಕ್ಷದ ದೊಡ್ಡ ನಾಯಕರು. ಇವತ್ತು ನಮ್ಮ ಪಕ್ಷ ನಿರ್ಧಾರ ಯಾಕೆ ತೆಗೆದುಕೊಂಡಿದೆ ಗೊತ್ತಿಲ್ಲ. ಪಕ್ಷದ ನಿರ್ಣಯ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ. ನಾಳೆ ಎಲ್ಲ ನಾಯಕರು ಬೆಂಗಳೂರಿನಲ್ಲಿ ಚರ್ಚೆ ನಡೆಸುತ್ತೇವೆ. ಯತ್ನಾಳ್ ಕಡೆಯಿಂದ ಹೈಕಮಾಂಡ್ಗೆ ಪತ್ರ ಬರೆಸುತ್ತೇವೆ. ಪುನಃ ಮರುಪರಿಶೀಲನೆ ಮಾಡುತ್ತೇವೆ ಮನವಿ ಮಾಡುತ್ತೇವೆ. ಯತ್ನಾಳ್ ಆಗಲಿ ನಾನಾಗಲಿ ನಮ್ಮ ಟೀಂ ಆಗಲಿ ಬಿಜೆಪಿಯಲ್ಲೇ ಮುಂದುವರೆಯುತ್ತೇವೆ ಎಂದು ಹೇಳಿದರು.
ಉಚ್ಚಾಟನೆಯಾಗಲು ಯಾರ ಕೈವಾಡ ಇದೆ ಎನ್ನುವುದನ್ನು ನಾನು ಹೇಳುವುದಿಲ್ಲ. ಯತ್ನಾಳ್ ಅವರು ಒಂಟಿಯಾಗಿಲ್ಲ ನಾವು ಗಟ್ಟಿಯಾಗಿದ್ದೇವೆ. ಅವರ ಪರ ನಾವಿದ್ದೇವೆ ಎಂದು ನುಡಿದರು.