ಚಿತ್ರದುರ್ಗ: ಸೂರ್ಯನು ಜಗತ್ತಿನ ಸಕಲ ಜೀವಸಂಕುಲಕ್ಕೆ ಚೈತನ್ಯದಾಯಕ ಹಾಗೂ ಆರೋಗ್ಯದಾತ. ಆದಿತ್ಯನ ಜನ್ಮದಿನವಾದ ಇಂದು ಸೂರ್ಯ ನಮಸ್ಕಾರಗಳ ಮೂಲಕ ಆರಾಧಿಸುವುದು ಶ್ರೇಷ್ಠ ಎಂದು ಜಿ.ಶ್ರೀನಿವಾಸ್ ಹೇಳಿದರು.
ನಗರದ ಸ್ಟೇಡಿಯಂ ರಸ್ತೆಯ ವೀರಸೌಧದಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಥಸಪ್ತಮಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಥ ಸಪ್ತಮಿ ಅಂಗವಾಗಿ ಭಾನುವಾರ ಬೆಳಗಿನ ಜಾವ 5.30ಕ್ಕೆ ಕಾರ್ಯಕ್ರಮ ಚಾಲನೆಗೊಂಡಿತು. ಶ್ವೇತ ವಸ್ತ್ರಧಾರಿಗಳಾಗಿ ಆಗಮಿಸಿದ್ದ ಯೋಗ ಬಂಧುಗಳು ಹಾಗೂ ಕೇಸರಿ ಕೋಟ್ ಧರಿಸಿದ್ದ ಯೋಗ ಗುರುಗಳು ಸೇರಿದಂತೆ ನೂರಾರು ಜನರು ಏಕಕಾಲದಲ್ಲಿ 108 ಸೂರ್ಯ ನಮಸ್ಕಾರಗಳನ್ನು ಮಾಡುವ ಮೂಲಕ ಪ್ರತ್ಯಕ್ಷ ದೈವಕ್ಕೆ ಭಕ್ತಿ ಗೌರವ ಅರ್ಪಿಸಿದರು. ಸೂರ್ಯನಮಸ್ಕಾರ ಶಿಕ್ಷಕರಾಗಿ ಕೆಂಚವೀರಪ್ಪ ಅವರು ಮಾರ್ಗದರ್ಶನ ನೀಡಿದರು.
ಪತಂಜಲಿ ಮಹಿಳಾ ಯೋಗ ಸಮಿತಿ ಹಾಗೂ ವೀರಸೌಧ ಯೋಗ ಕೇಂದ್ರದ ಶ್ರೀಮತಿ ಹೇಮಾವತಿ ಅವರ ನೇತೃತ್ವದ ತಂಡವು ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಸಂಘಟಿಸಿತ್ತು. ವೇದಿಕೆಯಲ್ಲಿ ಗುರುಮೂರ್ತಿ, ಹೇಮಾವತಿ, ದೇವಾನಂದ್ ನಾಯ್ಕ್, ಜಯಣ್ಣ, ವೀರೇಶ್, ಡಾ. ಶಶಿಕಿರಣ್, ನಾಗರಾಜ್ ಸಂಗಮ್, ಬಿ.ಟಿ. ಲವಕುಮಾರ್, ಅಣ್ಣಯ್ಯ, ಸೇವಾದಳದ ಪ್ರಮುಖರು ಹಾಗೂ ಭಾವನಾ ಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ನಾಗರಾಜ್ ಸಂಗಮ್ ಅವರು ಯೋಗಾಸಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದರು.

































