ಬೆಂಗಳೂರು: ಕಳೆದ 17 ವರ್ಷಗಳಿಂದ ಒಂದೇ ಒಂದು ಐಪಿಎಲ್ ಪ್ರಶಸ್ತಿ ಗೆಲ್ಲದ ಆರ್ಸಿಬಿ ಇದೀಗ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳ ಪ್ರೀತಿಗೆ ಋಣ ಸಂದಾಯ ಮಾಡುವ ಹಂಬಲದೊಂದಿಗೆ ಈ ಬಾರಿಯ ಟೂರ್ನಿಯನ್ನಾಡಲು ಸಜ್ಜಾಗಿ ನಿಂತಿದೆ. ಇಂದು(ಮಾ.17) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡ ಮತ್ತು ಅಭಿಮಾನಿಗಳು ಸಮಾಗಮ ಆಗಲಿದ್ದಾರೆ. ಈ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಆರ್ಸಿಬಿ ಅಭಿಮಾನಿಗಳು ಗಾಯಕ ಸಂಜಿತ್ ಹೆಗ್ಡೆಗೆ ಮಾಡಿದ ಮನವಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಂಜೆ 4 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆಯೂ ಹರಿಯಲಿದೆ. ರಾಜ್ಯದ ಜನಪ್ರಿಯ ಗಾಯಕ ಸಂಜಿತ್ ಹೆಗ್ಡೆ, ಗಾಯಕಿ ಐಶ್ವರ್ಯ ರಂಗರಾಜನ್ ಜತೆಗೆ ಕೇರಳದ ಪ್ರಸಿದ್ಧ ರ್ಯಾಪರ್ ಹನುಮಕಿಂಡ (ಸೂರಜ್ ಚೆರುಕಟ್) ಮತ್ತು ಆಸ್ಟ್ರೆಲಿಯಾದ ಡಿಜೆ, ಸಂಗೀತಕಾರ ಟಿಮ್ಮಿ ಟ್ರಂಪೆಟ್ (ಟಿಮೋಥಿ ಜುಡ್ ಸ್ಮಿತ್) ಸಂಗೀತದೊಂದಿಗೆ ಮನರಂಜನೆ ಒದಗಿಸಲಿದ್ದಾರೆ.
ಇಂದು ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಹಾಡಲಿರುವ ಗಾಯಕ ಸಂಜಿತ್ ಹೆಗ್ಡೆಗೆ, ಆರ್ಸಿಬಿ ಅಭಿಮಾನಿಗಳು ‘ಅಣ್ಣಾ ಸಂಜಿತ್ ಹೆಗ್ಡೆ RCB Unbox Event ಅಲ್ಲಿ ದಯವಿಟ್ಟು”ಸೋತೆ ಹೋದೆ ಸೋತೆ ಹೋದೆ” ಸಾಂಗ್ ಮಾತ್ರ ಹಾಡಬೇಡಿ. ಕಳೆದ 17 ವರ್ಷದಿಂದ ಸೋಲ್ತಾನೆ ಇದ್ದಿವಿ” ಎಂದು ಮನವಿ ಮಾಡಿದ್ದಾರೆ. ಈ ಪೋಸ್ಟ್ ಎಲ್ಲಡೆ ವೈರಲ್ ಆಗಿದೆ. ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹಿತ ಎಲ್ಲ ಆಟಗಾರರ ಅಭ್ಯಾಸವನ್ನು ವೀಸುವ ಅವಕಾಶ ಪಡೆಯಲಿದ್ದಾರೆ. ಜತೆಗೆ ತಂಡದ ಹೊಸ ಜೆರ್ಸಿ ಅಧಿಕೃತವಾಗಿ ಅನಾವರಣಗೊಳ್ಳುವ ನಿರೀಕ್ಷೆ ಇದೆ.
ಕಳೆದ ದೇಶೀಯ ಕ್ರಿಕೆಟ್ ಋತುವಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಫೈನಲ್ಗೇರಿಸಿದ್ದ ರಜತ್ ಪಾಟೀದಾರ್ ತಮ್ಮ ಚೊಚ್ಚಲ ಐಪಿಎಲ್ ನಾಯಕತ್ವದಲ್ಲಿ ಆರ್ಸಿಬಿಗೆ ಚೊಚ್ಚಲ ಕಪ್ ಗೆಲ್ಲಿಸಿ ಕೊಟ್ಟಾರೆ ಎಂದು ಕಾದು ನೋಡಬೇಕಿದೆ. ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆಡಲಿದೆ. ಇದು ಈ ಆವೃತ್ತಿಯ ಉದ್ಘಾಟನ ಪಂದ್ಯವಾಗಿದೆ.
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮ, ಜೋಶ್ ಹ್ಯಾಸಲ್ವುಡ್, ಯಶ್ ದಯಾಳ್