ಬೆಂಗಳೂರು : ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. ಅವ್ರನ್ನ ಅತಂತ್ರ ಮಾಡಲು ಯಾರು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಗೇಟ್ ಪಾಸ್ ನೀಡೋದು ಪಕ್ಕಾ ಅಂತ ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಒಬಿಸಿ ಸಲಹಾ ಮಂಡಳಿಗೆ ಸಿಎಂ ಅಧ್ಯಕ್ಷರಾದ ವಿಚಾರವಾಗಿ ಮಾತನಾಡಿದ ಅವರು, “ಎರಡೂವರೆ ವರ್ಷದ ಅಗ್ರಿಮೆಂಟ್ ಬಗ್ಗೆ ಕಳೆದ 2 ವರ್ಷಗಳಿಂದಲೂ ಚರ್ಚೆ ಇದೆ. ಡಿಕೆಶಿ ಸಹ ಅಗ್ರಿಮೆಂಟ್ಗೆ ಒಪ್ಕೊಂಡಿದ್ದಾರೆ. ನಾನು 6 ತಿಂಗಳಿಂದ ಬದಲಾವಣೆ ಗ್ಯಾರಂಟಿ ಅಂತ ಹೇಳ್ತಿದ್ದೇನೆ. ಸಿದ್ದರಾಮಯ್ಯರನ್ನ ಅತಂತ್ರ ಮಾಡಲು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯಗೆ ಗೇಟ್ಪಾಸ್ ನೀಡೋದು ಪಕ್ಕಾ” ಎಂದಿದ್ದಾರೆ.
“ಶಾಸಕರೇ ಸಿಎಂ ಬದಲಾವಣೆ ಬಗ್ಗೆ ಮಾತಾಡ್ತಿದ್ದಾರೆ. ರಾಜಣ್ಣ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕ್ರಾಂತಿ ಆಗೋದು ಗ್ಯಾರಂಟಿ, ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. 2 ವರ್ಷದಿಂದ ಸರ್ಕಾರ ಟೇಕ್ ಆಫ್ ಆಗಿಲ್ಲ. ಕಾಗೆ ಕೂರೋದಿಕ್ಕೂ ಕೊಂಬೆ ಬೀಳೋದಕ್ಕೂ ಸರಿಯಾಗಿದೆ. ಈಗ ಸಿದ್ದರಾಮಯ್ಯ ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿದ್ದಾರೆ” ಎಂದು ಹೇಳಿದ್ದಾರೆ.
“ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗೋದು ಗ್ಯಾರಂಟಿ ಆಗಿದೆ. ಸಿದ್ದರಾಮಯ್ಯ ದೆಹಲಿಗೆ ಹೋದರೆ ಇಲ್ಲಿಗೆ ಯಾರು ಬರ್ತಾರೆ? ಮಲ್ಲಿಕಾರ್ಜುನ ಖರ್ಗೆ ಬರ್ತಾರೋ? ಪರಮೇಶ್ವರ್ ಬರ್ತಾರೋ? ಡಿಕೆಶಿ ಬರ್ತಾರೊ? ಖರ್ಗೆಯವರಿಗೆ ಒಂದ್ಸಲ ಸಿಎಂ ಆಗೋ ಆಸೆ ಇದೆ. ಅವರೇ ಬರ್ತಾರಾ ನೋಡಬೇಕು. ಖರ್ಗೆ ಪ್ರತೀ ಸಲ ಸಿಎಂ ಹುದ್ದೆ ಹತ್ತಿರ ಬರ್ತಾರೆ, ಕೊನೇ ಕ್ಷಣಕ್ಕೆ ಕೊಕ್ ಆಗ್ತಾರೆ. ಈಗ ಖರ್ಗೆ ಅವರೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಈಗ ಖರ್ಗೆ ಬಂದರೂ ಬರಬಹುದು. ಡಿಕೆಶಿ ಈಗಾಗಲೇ ಸಿಎಂ ಪೋಸ್ಟ್ ಮೇಲೆ ಟವೆಲ್ ಹಾಕಿ ಕೂತಿದ್ದಾರೆ. ಇನ್ನೂ ಎರಡೂವರೆ ವರ್ಷ ಈ ಸರ್ಕಾರದಲ್ಲಿ ಅತಂತ್ರತೆ ಗ್ಯಾರಂಟಿ” ಎಂದು ವಾಗ್ದಾಳಿ ನಡೆಸಿದರು.