ಮಂಗಳೂರು: ಸ್ಪೀಕರ್ ಕಚೇರಿಯಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸುವವರು ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಿದರೆ ತನಿಖೆಗೆ ಸಿದ್ದವಿರುವುದಾಗಿ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಹೇಳಿದ್ದಾರೆ.
ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿ ಅವರು ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಭ್ರಷ್ಟಾಚಾರದ ಆರೋಪದ ಕುರಿತು ತಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಜಗತ್ತಿನಲ್ಲಿ ಎಲ್ಲದಕ್ಕೂ ಮದ್ದು ಇದೆ ಆದರೆ ಅಸೂಯೆಗೆ ಮದ್ದಿಲ್ಲ ಎಂದು ಕಿಡಿ ಕಾರಿದರು.
ಅಭಿವೃದ್ಧಿ ನಿರಂತರವಾಗಿದ್ದು ಅದನ್ನು ಹಂತಹಂತವಾಗಿ ಮಾಡುತ್ತಾ ಇರುತ್ತೇನೆ. ಯಾರಿಗಾದರೂ ಅದರ ಬಗ್ಗೆ ಸಂಶಯ ಸಂದೇಹಗಳು ಇದ್ದಲ್ಲಿ ಲಿಖಿತರೂಪದಲ್ಲಿ ನೀಡಬಹುದು. ಸೂಕ್ತವಾದ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದರು.
ಸಂಸದರು ಹಾಗೂ ಶಾಸಕರು ರಾಜಕೀಯ ಮಾತನಾಡುವಂತೆ ನಾನು ಸಂಸದೀಯ ಸ್ಥಾನದಲ್ಲಿ ಕುಳಿತುಕೊಂಡು ಹೇಳಿಕೆ ಕೊಡಲು ಸಾಧ್ಯವಿಲ್ಲ.
ನಮ್ಮ ಶಾಸಕರಿಗೆ ಯಾವುದೆಲ್ಲಾ ಸವಲತ್ತುಗಳನ್ನು ನೀಡಲು ಸಾಧ್ಯವೋ ಅದನ್ನು ನೀಡುವುದು ನನ್ನ ಜವಾಬ್ದಾರಿ. ಮುಂದೆಯೂ ಕೂಡ ಅದನ್ನು ನಾನು ಮಾಡುತ್ತೇನೆ ಎಂದರು.

































