ಎಸ್‌‍ಎಸ್‌‍ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನೀಡುತ್ತಿದ್ದ ನಕಲಿ ಅಂಕಪಟ್ಟಿ ಜಾಲವನ್ನು ಪತ್ತೆಹಚ್ಚಿದ್ದಾರೆ.

ಸಿಸಿಬಿ ಪೊಲೀಸರು ದಾರವಾಡದ ಪ್ರಶಾಂತ್‌ ಗುಂಡುಮಿ(41), ಬನಶಂಕರಿ ಮೂರನೇ ಹಂತ ಶ್ರೀನಿವಾಸ್‌‍ ನಗರದ ಮೊನಿಷ್‌(26) ಮತ್ತು ಗದಗ ಜಿಲ್ಲೆಯ ಲಕ್ಷ್ಮೀಶ್ವರ ಸಿಟಿ ರಾಜಶೇಖರ್‌ ಎಚ್‌. ಬಳ್ಳಾರಿ(41) ಬಂಧಿತ ಆರೋಪಿಗಳಾಗಿದ್ದಾರೆ.

ಎಸ್‌‍ಎಸ್‌‍ಎಲ್‌ಸಿ ಮತ್ತು ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ನಮ ಅಕಾಡೆಮಿಯು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಎಂದು ನಂಬಿಸಿ, ಒಬ್ಬೊಬ್ಬರಿಂದಲೂ 5 ರಿಂದ 10 ಸಾವಿರ ರೂ. ಪಡೆದು, ಸುಮಾರು 350 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ಆರೋಪಿಗಳು ವಿತರಣೆ ಮಾಡುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಬನಶಂಕರಿಯಲ್ಲಿ ಅಕಾಡೆಮಿ ನಡೆಸುತ್ತಿದ್ದ ಮಾಲೀಕ ಹಾಗೂ ದಾರವಾಡ ಇಬ್ಬರು ವಂಚಕರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಈ ನಕಲಿ ಅಂಕಪಟ್ಟಿಯನ್ನು ಸಾರಿಗೆ ಇಲಾಖೆ ಹಾಗೂ ಶಿಶು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ನೀಡಿ ಕೆಲವರು ಉದ್ಯೋಗ ಪಡೆದುಕೊಂಡಿದ್ದಾರೆಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ತನಿಖೆಯನ್ನು ಮುಂದುವರೆಸಿದ ಪೊಲೀಸರು ಧಾರವಾಡದ ಆರೋಪಿಯನ್ನು ಮೊಬೈಲ್‌ ಫೋನ್‌ ಸಮೇತ ಶ್ರೀನಗರದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.ಅಲ್ಲದೇ ಆತನ ಮೊಬೈಲ್‌ ಪರಿಶೀಲಿಸಿದಾಗ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿಯ ಹೆಸರಿನಲ್ಲಿ ಸುಮಾರು 300 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳಿರುವುದು ಕಂಡು ಬಂದಿದೆ.

ಈ ಆರೋಪಿಯನ್ನು ಹೆಚ್ಚಿನ ವಿಚಾಣೆಗೊಳಪಡಿಸಿ, ಶ್ರೀನಗರದಲ್ಲಿರುವ ಕಚೇರಿಯನ್ನು ಪರಿಶೀಲಿಸಿದಾಗ, ಅಂಕಪಟ್ಟಿಗಳನ್ನು ಪಡೆದುಕೊಂಡಿದ್ದ ಹಲವಾರು ವಿದ್ಯಾರ್ಥಿಗಳ ಅಂಕಪಟ್ಟಿಗಳ ನೈಜತೆಯ ಪರಿಶೀಲನೆಗೆ ಪಡೆದುಕೊಂಡು, ವಿವಿಧ ಇಲಾಖೆಗಳಿಂದ (ಸಾರಿಗೆ ಇಲಾಖೆ, ಪಾಸ್‌‍ಪೋರ್ಟ್‌ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ) ಅಕಾಡೆಮಿಗೆ ವರದಿ ಕೇಳಿರುವ ಮತ್ತು ಅಕಾಡೆಮಿಯು ನೀಡಿರುವ ಅಂಕಪಟ್ಟಿಗಳ ನೈಜತೆಯ ಬಗ್ಗೆ ವರದಿ ನೀಡಿರುವ ಸುಮಾರು 50 ಕ್ಕೂ ಹೆಚ್ಚು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೇ ಈತನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ಬ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೂ ಸಹ ಈ ಆರೋಪಿಗಳೊಂದಿಗೆ ಸೇರಿಕೊಂಡು, ಕಮೀಷನ್‌ ಆಸೆಗಾಗಿ ಮಧ್ಯವರ್ತಿಗಳಿಂದ ಹೆಚ್ಚಿನ ಹಣ ಪಡೆದು ಅಂಕಪಟ್ಟಿಗಳನ್ನು ಕೊಡಿಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಆತನ ವಶದಲ್ಲಿದ್ದ ಮೊಬೈಲ್‌ ಫೋನ್‌ನನ್ನು ಪರಿಶೀಲಿಸಿದಾಗ 50 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳಿರುವುದು ಕಂಡು ಬಂದಿರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಬೆಳಗಾವಿ ಮೂಲದ ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಪತ್ತೆಕಾರ್ಯ ಮುಂದುವರಿದಿದೆ.