ಮಂಡ್ಯ : ತಾವು 2 ಸಾವಿರ ರೂ. ಕೊಡುವ ವಾಗ್ದಾನ ಮಾಡಿ 20 ಸಾವಿರ ನಿಮ್ಮ ಜೇಬಿಂದ ಕಿತ್ತುಕೊಳ್ಳುವ ಪ್ರವೃತ್ತಿ ಕಾಂಗ್ರೆಸ್ ಸರಕಾರದ್ದು. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಂಸದೆ ಮತ್ತು ಬಿಜೆಪಿ ನಾಯಕಿ ಶ್ರೀಮತಿ ಸುಮಲತಾ ಅಂಬರೀಷ್ ಅವರು ಮನವಿ ಮಾಡಿದ್ದಾರೆ.
ಇಂದಿಲ್ಲಿ ಜನಾಕ್ರೋಶ ಯಾತ್ರೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಉಚಿತ ಉಚಿತ ಉಚಿತ ಎಂಬ ಮಾತುಗಳನ್ನು ನಾವು ಎರಡು ವರ್ಷ ಕೇಳಿಸಿಕೊಂಡೆವು. ಈಗ ಗೃಹಲಕ್ಷ್ಮಿ ಸೇರಿ ಅನೇಕ ಭಾಗ್ಯಗಳನ್ನು ಮರೆತೇ ಬಿಡುವ ಸ್ಥಿತಿಗೆ ನಾವು ಬಂದಿದ್ದೇವೆ. ಇದೆಂಥ ದೌರ್ಭಾಗ್ಯ ಎಂಬ ದುಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಉಚಿತದ ವಾಗ್ದಾನ ನಿಭಾಯಿಸಲು ಆಗದೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಮಾತ್ರವಲ್ಲದೇ ಅದಕ್ಕಿಂತ ಮೇಲ್ವರ್ಗದವರೂ ಹೇಗೆ ಜೀವನ ಮಾಡುವುದೆಂಬ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ಎಂದು ವಿಶ್ಲೇಷಿಸಿದರು.ಪೆಟ್ರೋಲ್, ಡೀಸೆಲ್, ಚಿನ್ನವು ಅಂತರರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಸ್ಟಾಕ್ ಮಾರ್ಕೆಟ್ ಕುಸಿದರೆ ಅದು ಪ್ರಪಂಚದ ವಿದ್ಯಮಾನ ಎಂದು ಅವರು ವಿವರಿಸಿದರು.