ಚಾಮರಾಜನಗರ : ಮೂಲ ಧರ್ಮ ಮರೆಮಾಚಿ ಗುಂಡ್ಲುಪೇಟೆಯ ಲಿಂಗಾಯತ ಮಠವೊಂದಕ್ಕೆ ಮಠಾಧೀಶರಾಗಿದ್ದ ಮುಸ್ಲಿಂ ಯುವಕನ ಹೆಸರಿಗೆ ಆನ್ಲೈನ್ ಮೂಲಕ ಮುಸ್ಲಿಂ ಟೋಪಿ ಬಂದಿರುವುದು ಮತ್ತು ಅವರ ಕೆಲವು ಫೋಟೊ ಮತ್ತು ವಿಡಿಯೋಗಳು ಬಹಿರಂಗವಾಗಿ ಹೊಸ ವಿವಾದ ಸೃಷ್ಟಿಯಾಗಿದೆ.
ಲಿಂಗದೀಕ್ಷೆ ಪಡೆದು ಮಠಾಧೀಶರಾಗಿದ್ದ ಮುಸ್ಲಿಂ ಯುವಕ ತಮ್ಮ ಮೂಲ ಧರ್ಮದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಹಾಗೂ ತಮ್ಮ ದಾಖಲಾತಿಗಳಲ್ಲಿ ಮೂಲಧರ್ಮದ ಹೆಸರನ್ನು ಉಳಿಸಿಕೊಂಡಿರುವುದು ಬಹಿರಂಗವಾದ ಬಳಿಕ ಸ್ವಾಮೀಜಿಯ ನಡೆಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಚೌಡಹಳ್ಳಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಸ್ವಾಮೀಜಿ ಪೀಠತ್ಯಾಗ ಮಾಡಿ ಮಠದಿಂದ ಹೊರ ನಡೆದಿದ್ದಾರೆ.
ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು. ಪೂರ್ವಾಶ್ರಮದಲ್ಲಿ ಇವರ ಹೆಸರು ಮಹಮದ್ ನಿಸಾರ್ ಎಂದು ಇತ್ತು. ಮಹಮದ್ ನಿಸಾರ್ ಅವರು ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಕಳೆದ ವರ್ಷ ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮ ದೀಕ್ಷೆ ಪಡೆದಿದ್ದರು. ಲಿಂಗದೀಕ್ಷೆ ಪಡೆದ ಬಳಿಕ ಮಹಮದ್ ನಿಸಾರ್ ಅವರಿಗೆ ನಿಜಲಿಂಗ ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಗಿತ್ತು.
ಬಸವ ತತ್ವ ಪ್ರಚಾರಕರಾಗಿದ್ದ ನಿಜಲಿಂಗ ಸ್ವಾಮೀಜಿ ಅವರನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಚೌಡಹಳ್ಳಿ ಗ್ರಾಮದಲ್ಲಿನ ಗುರುಮಲ್ಲೇಶ್ವರ ಶಾಖಾಮಠಕ್ಕೆ ಪೀಠಾಧಿಪತಿ ಮಾಡಲಾಗಿತ್ತು. ಸುಮಾರು ಒಂದೂವರೆ ತಿಂಗಳು ಚೌಡಹಳ್ಳಿಯ ಗುರುಮಲ್ಲೇಶ್ವರ ಮಠದಲ್ಲಿ ಪ್ರವಚನ ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದರು. ನಿಜಲಿಂಗ ಸ್ವಾಮೀಜಿ ತಾವು ಮೂಲತಃ ಮುಸ್ಲಿಂ ಧರ್ಮದ ವ್ಯಕ್ತಿ ಎಂಬುದನ್ನು ಗ್ರಾಮಸ್ಥರಿಗೆ ತಿಳಿಸಿರಲಿಲ್ಲ. ಆದರೆ, ಮಠದ ಭಕ್ತರೊಬ್ಬರಿಗೆ ತಮ್ಮ ಮೊಬೈಲ್ ನೀಡಿದ್ದ ಸಂದರ್ಭದಲ್ಲಿ ಸತ್ಯ ಬಯಲಾಗಿತ್ತು.
ಭಕ್ತ ಸ್ವಾಮೀಜಿಯ ಮೊಬೈಲ್ನಲ್ಲಿನ ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ನೋಡಿದಾಗ ಅದರಲ್ಲಿ ನಿಸಾರ್ ಮಹಮದ್ ಎಂದು ಇತ್ತು. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ವಾಮೀಜಿಯ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂಲತಃ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬುವುದನ್ನು ಮುಚ್ಚಿಟ್ಟಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಸ್ವಾಮೀಜಿ ಕೆಲವು ದಿನಗಳ ಹಿಂದೆ ಆನ್ಲೈನ್ನಲ್ಲಿ ಮುಸ್ಲಿಮರು ಧರಿಸುವ ಟೋಪಿಯನ್ನು ಆರ್ಡರ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಮಂಗಳವಾರ ಈ ಟೋಪಿ ಮಠದ ವಿಳಾಸಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಮ್ ಯುವಕನ ಧರ್ಮಾಂತರದ ಉದ್ದೇಶದ ಕುರಿತು ಇರುವ ಅನುಮಾನ ಇನ್ನಷ್ಟು ದಟ್ಟವಾಗಿದೆ.
ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮಹಮ್ಮದ್ ನಿಸಾರ್ ಎನ್ನಲಾದ ಮದ್ಯ ಮತ್ತು ಮಾಂಸ ಸೇವಿಸುವ ಫೋಟೊಗಳು ಮತ್ತು ಸಲಿಂಗ ಕಾಮದ ವಿಡಿಯೋ ತುಣುಕುಗಳು ಕೂಡ ಬೆಳಕಿಗೆ ಬಂದಿವೆ. ಇದು ಲಿಂಗ ದೀಕ್ಷೆ ಸೇವಿಸುವ ಮೊದಲಿನದ್ದೋ ಅಥವಾ ನಂತರದ್ದೋ ಎನ್ನುವುದು ಇನ್ನಷ್ಟೇ ದೃಢಪಡಬೇಕಿದೆ.