ಫರಿದಾಬಾದ್ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಭಯೋತ್ಪಾದಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹರಿಯಾಣದ ಫರಿದಾಬಾದ್ನಲ್ಲಿ ಅಬ್ದುಲ್ ರೆಹಮಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಫೈಜಾಬಾದ್ ಮೂಲದ ಅಬ್ದುಲ್ ರೆಹಮಾನ್, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಮ ಮಂದಿರದ ಮೇಲೆ ದಾಳಿ ನಡೆಸುವ ಸಂಚು ಬಹಿರಂಗವಾಗಿರುವುದಾಗಿ ವರದಿಯಾಗಿದೆ.
ರಾಮಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ಬಳಸಿ ದಾಳಿ ಮಾಡುವುದು ಅಬ್ದುಲ್ ರೆಹಮಾನ್ ಸಂಚಾಗಿತ್ತು. ಈ ಸಂಚಿನ ಭಾಗವಾಗಿ, ಅಬ್ದುಲ್ ಹಲವು ಬಾರಿ ರಾಮ ಮಂದಿರದ ಪರಿಶೀಲನೆ ನಡೆಸಿದ್ದ ಮತ್ತು ಎಲ್ಲಾ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐಗೆ ನೀಡಿದ್ದ ಎನ್ನಲಾಗಿದೆ.
ಅಬ್ದುಲ್ ಫೈಜಾಬಾದ್ನಿಂದ ರೈಲಿನಲ್ಲಿ ಫರಿದಾಬಾದ್ ತಲುಪಿದ್ದ. ಅಲ್ಲಿ ವ್ಯಕ್ತಿಯೊಬ್ಬ ಹ್ಯಾಂಡ್ ಗ್ರೆನೇಡ್ಗಳನ್ನು ನೀಡಿದ್ದ. ಬಳಿಕ ಅವುಗಳನ್ನು ತೆಗೆದುಕೊಂಡು ರೈಲಿನಲ್ಲಿ ಅಯೋಧ್ಯೆಗೆ ತೆರಳಿ ದಾಳಿ ಮಾಡುವ ಸಂಚು ರೂಪಿಸಿದ್ದ. ಆದರೆ ಕೇಂದ್ರ ಸಂಸ್ಥೆಗಳ ಮಾಹಿತಿಯ ಆಧಾರದ ಮೇಲೆ ದಾಳಿಗೂ ಮುನ್ನ ಗುಜರಾತ್ ಎಟಿಎಸ್ ಮತ್ತು ಫರಿದಾಬಾದ್ ಎಸ್ಟಿಎಫ್ ಶಂಕಿತ ಭಯೋತ್ಪಾದಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.