ಬೆಂಗಳೂರು: ‘ಸಾಕು ನಾಯಿಗಳನ್ನು ಅವುಗಳ ಮಾಲೀಕರು ಸರಿಯಾಗಿ ನಿಯಂತ್ರಣ ಮಾಡದೆ ಬೇಕಾಬಿಟ್ಟಿ ತಿರುಗಲು ಬಿಡುತ್ತಿರುವ ಕಾರಣ ಗಲಾಟೆಗಳು ನಡೆಯುತ್ತಿವೆ. ಕ್ಷುಲ್ಲಕ ಆರೋಪಗಳನ್ನು ಹೊತ್ತ ಕ್ರಿಮಿನಲ್ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುತ್ತಿರುವುದು ಹೆಚ್ಚಾಗುತ್ತಿದೆ’ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ನಮ್ಮ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ರದ್ದುಪಡಿಸಬೇಕು’ ಎಂದು ಕೋರಿ ದಾಸರಹಳ್ಳಿಯ ‘ಕೆಎಸ್ಆರ್ ಕಾರ್ಡೇಲಿಯಾ ಅಪಾರ್ಟ್ಮೆಂಟ್’ ನಿವಾಸಿಗಳಾದ ವಕೀಲ ಅಭಿಷೇಕ್, ಕೀಲು ಮೂಳೆ ತಜ್ಞ ಡಾ.ಅಲೋಕ್, ಎಂಜಿನಿಯರ್ ಋಷಿಕೇಶ್ ಮತ್ತು ನಿವೃತ್ತ ಸರ್ಕಾರಿ ನೌಕರ ಅಶೋಕ್ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಸಾಕು ನಾಯಿಗಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದಾಗ ಅವು ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವ ಕಾರಣದಿಂದ ಮನಸ್ತಾಪಗಳು ಉಂಟಾಗುತ್ತಿವೆ. ಸಾಕು ನಾಯಿಗಳ ಮಾಲೀಕರು ಅವುಗಳನ್ನು ನಿಯಂತ್ರಿಸದೆ ಇರುವುದು ತರವಲ್ಲ. ಕಡೆಗೆ ಕ್ಷುಲ್ಲಕ ಕಾರಣಗಳೇ ದೊಡ್ದದಾಗಿ ಇಂತಹ ಕ್ರಿಮಿನಲ್ ಪ್ರಕರಣಗಳು ಹುಟ್ಟುತ್ತಿವೆ’ ಎಂದು ಅಸಹನೆ ವ್ಯಕ್ತಪಡಿಸಿದರು.
ನಾಯಿ ಮಾಲೀಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ಮತ್ತು ಅವರ ಕುಟುಂಬದ ಇತರೆ ಮೂವರ ವಿರುದ್ಧದ ತನಿಖೆಗೆ ತಡೆ ನೀಡಿದರು. ಪ್ರತಿವಾದಿಗಳಾದ ಅಮೃತಹಳ್ಳಿ ಠಾಣಾ ಪೊಲೀಸರು ಮತ್ತು ದೂರುದಾರ ಆಕರ್ಷ್ ಕುಮಾರ್ ರೈ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿದರು





























