ನವದೆಹಲಿ: ದಸರಾಗೆ ಅಂದರೆ ಸೆಪ್ಟೆಂಬರ್ 22ರಂದು ಹೊಸ ಜಿಎಸ್ಟಿ ನೀತಿ ಜಾರಿಯಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ದೇಶದ ಜನರಿಗೆ ದಸರಾ ಸಂಭ್ರಮ ಹೆಚ್ಚಿಸಿದೆ.
ಕಳೆದ ಸ್ವಾತಂತ್ರ್ಯ ದಿನದಂದು ದೆಹಲಿಯ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ನಿಂತು ಜಿಎಸ್ಟಿ ತೆರಿಗೆ ಇಳಿಕೆ ಘೋಷಿಸಿದ್ದರು. ಇದೀಗ ಈ ಘೋಷಣೆ ಜಾರಿಗೆ ಬರುತ್ತಿದೆ. ದಸರಾಗೆ ಅಂದರೆ ಸೆಪ್ಟೆಂಬರ್ 22ರಂದು ಹೊಸ ಜಿಎಸ್ಟಿ ನೀತಿ ಜಾರಿಯಾಗುತ್ತಿದೆ. ಹಲವು ಜನಪರ ಸುಧಾರಣೆ ತರಲಾಗಿದೆ. ಈ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹೊಸ ನೀತಿ ಕುರಿತು ಮಾಹಿತಿ ನೀಡಿದ್ದಾರೆ.
ಬುಧವಾರ ನಡೆದ ಜಿಎಸ್ಟಿ ಕೌನ್ಸಿಲ್ ಸಭೆ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಎರಡೇ ಸ್ಲ್ಯಾಬ್ ಸೆಪ್ಟೆಂಬರ್ 22ರಿಂದ ಹೊಸ ಜಿಎಸ್ಟಿ ನೀತಿ ಜಾರಿಗೆ ಬರುತ್ತಿದೆ. ಹೀಗಾಗಿ ಕೇವಲ ಎರಡು ಸ್ಲ್ಯಾಬ್ ಮಾತ್ರ ಇರಲಿದೆ. ಅಂದರೆ ಶೇಕಡಾ 5ರಷ್ಟು ಜಿಎಸ್ಟಿ ಹಾಗೂ ಶೇಕಡಾ 18 ರಷ್ಟು ಜಿಎಸ್ಟಿ. ಇನ್ನು ಜೀವ ವಿಮೆ ಹಾಗೂ ಆರೋಗ್ಯ ವಿಮೆಗೆ ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಇದರಿಂದಾಗಿ ವಿಮೆ ಮೊತ್ತಗಳು ಇಳಿಕೆಯಾಗಲಿವೆ. ಸ್ಲ್ಯಾಬ್ ಬದಲಾವಣೆಯಿಂದ ದರಗಳು ಬದಲಾವಣೆ ಆಗಲಿವೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳು ಮೇಲೆ ತೆರಿಗೆ ಶೇ.5 ಕ್ಕೆ ಇಳಿಕೆ ಮಾಡಲಾಗುತ್ತಿದೆ. ಯುಎಚ್ ಡಿ ಹಾಲು, ಚಪಾತಿ, ಪನ್ನೀರ್ ಸೇರಿ ಇವುಗಳ ಮೇಲೆ ತೆರಿಗೆ ಪೂರ್ಣ ವಿನಾಯಿತಿ ನೀಡಲಾಗಿದ್ದು, ಇವು ಅಗ್ಗವಾಗಲಿವೆ.
ಎಲ್ಲಾ ಟಿವಿಗಳು ಶೇ.18, ವಾಷಿಂಗ್ ಮಷಿನ್ಗಳಿಗೆ ಶೇ.18ರಷ್ಟು ಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ. ರೈತರು ಬಳಕೆ ಮಾಡುವ ವಸ್ತುಗಳ ಮೇಲೆ ಶೇ.5ಕ್ಕೆ ತೆರಿಗೆ ಇಳಿಕೆ ಮಾಡಲಾಗುತ್ತಿದೆ. ಟ್ರ್ಯಾಕ್ಟರ್, ಟ್ರ್ಯಾಕ್ಟರ್ ಟೈರ್ಗಳು, ಕೃಷಿ ಉಪಕರಣಗಳು, ಹನಿ ನೀರಾವರಿ, ಸ್ಪ್ರಿಂಕ್ಲರ್ ಉಪಕರಣಗಳ ಮೇಲೆ ಭಾರೀ ಪ್ರಮಾಣದಲ್ಲಿ ತೆರಿಗೆ ಇಳಿಸಲಾಗಿದೆ. ಸಿಮೆಂಟ್ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಆರೋಗ್ಯ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. 33 ಜೀವ ರಕ್ಷಕ ಔಷಧಗಳ ಮೇಲೆ ವಿನಾಯಿತಿ ನೀಡಲಾಗಿದೆ. ಸಣ್ಣ ಕಾರು, ಬೈಕ್ಗಳಿಗೆ ಶೇ.18 ರಷ್ಟು ಜಿಎಸ್ಟಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಕಾರು, ಬೈಕ್ಗಳ ಮೇಲಿನ ಬೆಲೆ ಕಡಿಮೆಯಾಗಲಿದೆ. ಬಸ್ , ಟ್ರಕ್ಸ್, ಅಂಬುಲೆನ್ಸ್, ತ್ರಿಚಕ್ರ ವಾಹನಗಳು, ಆಟೋಮೊಬೈಲ್ ವಸ್ತುಗಳು ಶೇ. 18ಕ್ಕೆ ಇಳಿಕೆಯಾಗುತ್ತಿವೆ.
ಶೇ.40 ಸ್ಲ್ಯಾಬ್: ತಂಬಾಕು ಉತ್ಪನ್ನ ದುಬಾರಿ ಈ ಬಾರಿ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಹೊಸ ಸ್ಲ್ಯಾಬ್ ಸೇರಿಸಲಾಗಿದೆ. ಸಿಗರೇಟ್, ಗುಟ್ಕಾ, ಪಾನ್ ಮಸಾಲ, ತಂಬಾಕು ಪದಾರ್ಥಗಳ ಮೇಲೆ ಶೇಕಡಾ 40 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಮೂಲಕ ಈ ವಸ್ತುಗಳು ಮತ್ತಷ್ಟು ದುಬಾರಿಯಾಗಲಿವೆ. 350 ಸಿಸಿಗಿಂತ ಮೇಲ್ಪಟ್ಟ ಐಷಾರಾಮಿ ಬೈಕ್ಗಳಲ್ಲದೆ ಲಕ್ಸುರಿ ಕಾರುಗಳ ಮೇಲೆ ಶೇ.40 ಜಿಎಸ್ಟಿ ವಿಧಿಸಲಾಗಿದ್ದು, ಇವು ಮತ್ತಷ್ಟು ದುಬಾರಿಯಾಗಲಿವೆ. ಹೊಸ ಜಿಎಸ್ಟಿ ನೀತಿಯಿಂದ ಜನಸಾಮಾನ್ಯರಿಗೆ ಒಳಿತಾಗಲಿದೆ.
ಜನಸಾಮಾನ್ಯರು ನೀಡುತ್ತಿದ್ದ ದುಬಾರಿ ತೆರಿಗೆಯಿಂದ ರಿಲೀಫ್ ಸಿಗಲಿದೆ. ಕಡಿಮೆ ಬೆಲೆಗೆ ವಸ್ತುಗಳು ಲಭ್ಯವಾಗಲಿವೆ. ಜತೆಗೆ ಔಷಧ ಸೇರಿದಂತೆ ಕೆಲ ವಸ್ತುಗಳ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಇದು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಹೊರೆ ನೀಡಲಿದೆ. ಹೊಸ ಜಿಎಸ್ಟಿ ನೀತಿಯಿಂದ ಬರೋಬ್ಬರಿ 48 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ. 93 ಸಾವಿರ ಕೋಟಿ ಆದಾಯ ಕಡಿಮೆಯಾಗಲಿದೆ.